ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Thursday, October 31, 2013


***********************************************************************************************
ನಿತ್ಯವೂ ಮಾಡಬೇಕೆಂಬ ಹಂಬಲ ವ್ಯಾಯಾಮ!
ಅದಕಾಗಿ ಹುಡುಕುವೆನು ಹೊಸ-ಹೊಸ ಆಯಾಮ!
ನಿದ್ರೆಯಲ್ಲಿ ಮುಳುಗಿ ದಿನವೂ ಮಾಡುತಿರುವೆನು ಆರಾಮ!
ಸೋಮಾರಿತನವ ಓಡಿಸಿ ನಾನಾಗ ಬಯಸಿದ್ದೇನೆ ಬಲರಾಮ!

***********************************************************************************************

ಬೇಕು-ಬೇಡ ಎನ್ನುವ ಬೆಳೆ-ಕಳೆಯ ಕಾದಾಟ!


***********************************************************************************************
ಬದುಕೆಂಬ ಹೊಲದಲ್ಲಿ ಬೇಕು ಎನ್ನುವ ಬೆಳೆಯನ್ನು ಬಿತ್ತುತ್ತಾ ಹೋದಷ್ಟು ಬೇಡವಾದ ಸಮಸ್ಯೆಗಳು, ಕಳೆಗಳು, ಹುಳ-ಹುಪ್ಪಟೆಗಳು ಹೆಚ್ಚಾಗುತ್ತಾ ನಮ್ಮ ಬೇಕೆನ್ನುವ ಬೆಳೆಯ ನಾಶ ಮಾಡುತ್ತವೆ, ಅದಕ್ಕಾಗಿಯೆ ಆದಷ್ಟು ನಮಗೆ ಬೇಕು ಎನ್ನುವ ಆ ಬೆಳೆಯನ್ನು ಪೋಷಿಸಿ ಬೆಳೆಸುವುದು, ನಮ್ಮೆಲ್ಲರ ಹೊಣೆಯೇ ಹೊರತು ಅದಕ್ಕೆ ಪ್ರಕೃತಿ ಹೊಣೆಯಲ್ಲ. ನಮ್ಮ ಕೆಲಸ ಕೇವಲ ನಮಗೆ ಬೇಕಾದುದನ್ನು ಆರಿಸಿಕೊಳ್ಳುವುದು, ಬೆಳೆಸುವುದು ಮತ್ತು ಉಳಿಸಿಕೊಳ್ಳುವುದೇ ಹೊರತು ಪ್ರಜ್ಞಾಹೀನರಾಗಿ ಕೂರುವುದಲ್ಲ. ಹುಟ್ಟಿದಾಗ ಬರುವ ಈ ಪ್ರಜ್ಞೆ ಜ್ಞಾನವಾಗಿ ನಂತರ ಸತ್ತಾಗ ಪ್ರಜ್ಞಾಹೀನವಾಗುವುದು ಇದ್ದೇ ಇದೆ. ಸಾಯುವ ಮುಂಚೆಯೇ ಈ ಪ್ರಜ್ಞಾಹೀನರಾಗುವುದು ಎಷ್ಟು ಸರಿ! ಪ್ರಕೃತಿ ನಮ್ಮ ಹುಟ್ಟಿದಂದಿನಿಂದ ನಮಗೆ ಬೇಕಾದುದನ್ನು ಆರಿಸಿಕೊಳ್ಳಲು ಬಿಟ್ಟಿರುವಾಗ ನಮ್ಮ ಸಾವನ್ನು ಅದಕ್ಕೆ ಏಕೆ ಆಯ್ಕೆ ಮಾಡಿಕೊಳ್ಳಲು ಬಿಡಬಾರದು. ಈ ಆತ್ಮಹತ್ಯೆಯಿಂದ ಪ್ರಕೃತಿಗೆ ನೀನು ಮೋಸ ಮಾಡುತ್ತಿಲ್ಲವೇ ಓ ಮನುಜ? ಆತ್ಮಹತ್ಯೆ ಮಾಡಿಕೊಳ್ಳುವ ಹಕ್ಕು ನಿನಗಿಲ್ಲ. ಉಸಿರಲಿ ಉಸಿರಾಗಿ ಪ್ರಕೃತಿಯೇ ನಿನ್ನ ಕರೆದೊಯ್ಯುವ ತನಕ ಉಸಿರಾಡುವುದ ನೀನೆಂದಿಗೂ ಮರೆಯದಿರು. ನಿನ್ನ ಬೇಕು ಬೇಡಗಳ ನಡುವಿನ ಅಂತರವನ್ನು ಅರ್ಥ ಮಾಡಿಕೊಂಡು ಕೊನೆಯ ಉಸಿರಿರುವತನಕ ಪ್ರಕೃತಿಯು ದಯಪಾಲಿಸುವ ಬುದ್ದಿ ನೀ ಅರಿತು ಪ್ರಕೃತಿಯ ಒಳಗೊಂದು ಪ್ರಕೃತಿ ನಿನಾಗೋ ಓ ಮೂಢ!
***********************************************************************************************
***********************************************************************************************
ಚಪಲ!
____
ಕಣ್ಣಿಗೆ ಕಾಣುವ ಆಸೆ
ಕಿವಿಗೆ ಕೇಳುವ ಆಸೆ
ನಾಲಿಗೆಗೆ ಸವಿಯುವ ಆಸೆ
ಚರ್ಮಕೆ ಸ್ಪರ್ಶಿಸುವಾಸೆ
ಮೂಗಿಗೆ ಸುವಾಸನೆಯ ಸವಿಯುವಾಸೆ
ಎನ್ನ ಮನಕೆ ನಿನ್ನಯ ನೆನಪಿನ ಪುಟಗಳ
ಮತ್ತೆ ಮತ್ತೆ ತಿರುವಿ ಹಾಕುವ ಮಹದಾಸೆ!


ಶೋಕಿಪ್ರಿಯೇ!!
_________
ನಿಷ್ಕಲ್ಮಶ ಪ್ರೀತಿಗೆ ಬಂಡೆಯಂತಹ ಮನಸು ಕೂಡ ಕರಗುವುದಂತೆ!
ಕಾಸಿರುವ ಇನಿಯನಿದ್ದರೆ, ಮನಸು ಮಳಿಗೆಗಳ ಕಡೆ ಸದಾ ಕರೆಯುವುದಂತೆ!

***********************************************************************************************

Wednesday, October 30, 2013

ಆತುರಗಾರನಿಗೆ ಬುದ್ದಿ ಮಟ್ಟ!

***********************************************************************************************
ಅರ್ಥವಿಲ್ಲದ ಬದುಕಲ್ಲಿ
ಸಮಯದಭಾವವೆಂಬ ಭಯದಲ್ಲಿ
ಜವಾಬ್ದಾರಿಯೆಂಬ ಅಮೂಲ್ಯ ರತ್ನವ
ಲಗಾಮು ಇಲ್ಲದ ಕುದುರೆಯನೇರಿ ಕೊಂಡೊಯ್ಯುತಿರೆ,
ಜೀವನವೇ ವ್ಯರ್ಥವಾಗುವುದು!
***********************************************************************************************

ಆಸೆಯೆಂಬ ಕೂಸಿಗೆ ತಾಯಾಗು!

***********************************************************************************************
ಆಸೆಯೆಂಬ ಮಗುವ
ಹೆತ್ತ ಗಳಿಗೆಯಲಿ ಬಂದಿಹವು
ನಿರಂತರ ಟೀಕಾಕಾರ!
ಅದನೆತ್ತ ಕರುಳಿಗಷ್ಟೇ ಗೊತ್ತು
ಅದು ತನ್ನ ಅಂಶವೆಂದು
ಅದಕೆ ಬೇಕಿಲ್ಲ ಆಕಾರ!

ಯಾರೇನೇ! ಎಂದರೂ...
ಕುರೂಪ ಹೊಂದಿದ ಮಗುವ
ಮುದ್ದಿಸುವವಳು ಆ ಹೆತ್ತ ತಾಯಿ!
ನೀ ಹೆತ್ತ ಆಸೆಯನು
ಕಾಪಾಡಲು ನೀ ಆಗಬೇಕಾಗಿಲ್ಲ
ಯಾರ ಅನುಯಾಯಿ!

ಮಗುವು ಹೇಗಿದ್ದರೂ
ಅದು ಅವಳ ಸರ್ವಸ್ವ
ಯಾರ ಮಾತನೂ ಕೇಳಳು
ತನ್ನ ಮುದ್ದು ಕಂದಮ್ಮನ ಪೋಷಿಸಲು!

ನೀ ಹೊತ್ತ ಆಸೆಯು
ನಿನ್ನ ಸಾಮರ್ಥ್ಯದ ಬೀಜವಲ್ಲವೇ
ಪರರ ಮಾತ ಕೇಳಿ ನೀನೆಂದಿಗೂ
ಚಿವುಟದಿರು ನಿನ್ನ ಕುಡಿಯೊಡೆದ
ಆ ಗುರಿಯೆಂಬ ಪುಟ್ಟ ಕೂಸನು!

ನಿನ್ನ ಪ್ರೀತಿಯಲಿ ನೀನದನು ಬೆಳೆಸು
ಅದಕೆ ನೋವಾದಾಗ ಸಂತೈಸು
ನಿನ್ನ ಆಸೆಯೆಂಬ ಮಗುವಿಗೆ ನೀ
ತಾಯಿಯಂತಲ್ಲದೆ, ಬೇರ್ಯಾರ
ರೂಪದಲ್ಲೂ ಉಳಿಸಲಾಗದು, ಬೆಳೆಸಲಾಗದು!

~ಜಿ.ಪಿ.ಗಣಿ~

***********************************************************************************************





Sunday, October 20, 2013

ಆಯುಧ ಪೂಜೆಯಲ್ಲೂ ಆಧುನೀಕತೆ / ಆಧುನೀಕತೆಯಲ್ಲಿ ಆಡಂಬರದ ಭಕ್ತಿ!

***********************************************************************************************
ಅಂದು ಆಯುಧ ಪೂಜೆ, ಆಗಷ್ಟೇ ನನ್ನ ದ್ವಿಚಕ್ರ ವಾಹನಕ್ಕೆ ದೃಷ್ಟಿಯಾಗಬಾರದೆಂದು ನಿಂಬೆ ಹಣ್ಣು ಮೆಣಸಿನಕಾಯಿ ಮತ್ತೆ ಎರಡು ಚಿಗುರಿದ ಬಾಳೆಕಂದನ್ನು ಕಟ್ಟಿ ಪೂಜೆ ಮಾಡಿ ಸುತ್ತಾಡಿ ಬರುವ ಎಂದು ಹೊರಟೆ.  ಸ್ನೇಹಿತನನ್ನು ಭೇಟಿ ಮಾಡುವ ಎಂದು ಅವನಿಗೆ ಕರೆ ಮಾಡಿ ಅವನ ಮನೆಗೆ ಹೋದೆ. ಮನೆ ದೇವಸ್ತಾನದ ಬಳಿಯಲ್ಲಿ ಇದ್ದದ್ದರಿಂದ ನನ್ನ ದ್ವಿಚಕ್ರ ವಾಹನವನ್ನು ಅವನ ಮನೆಯ ಮುಂದೆಯೇ ನಿಲ್ಲಿಸಿ ಇಬ್ಬರೂ ಮಾತನಾಡುತ್ತ ದೇವಸ್ತಾನ ಸೇರಿದೆವು. ಕೂರುವ ಬೆಂಚಿನ ಮೇಲೆ ಕುಳಿತು ಸ್ಕೂಲಿನ ಹಳೆ ನೆನಪುಗಳು ಈಗಿನ ಬದುಕಿನ ಪುಟಗಳ ಸ್ವಲ್ಪ ಹಿಂದೆ ತಿರುವಿ  ಹರಟೆ ಶುರು ಮಾಡಿದ್ದೆವು. ಮೂರು ದೇವಸ್ತಾನಗಳು ಇದ್ದವು ಎರಡು ದೇವಸ್ತಾನಗಳು ಬಾಗಿಲು ಮುಚ್ಚಿದ್ದವು, ಒಂದು ದೇವಸ್ತಾನದಲ್ಲಿ ಬಂದವರ ವಾಹನಗಳಿಗೆ ಪೂಜೆ ಭರದಿಂದ ಸಾಗಿತ್ತು. ಒಂದರ ನಂತರ ಮತ್ತೊಂದು. ಹಾಗೆಯೇ ಒಬ್ಬರು ಆಂಟಿ ಮತ್ತು ಅವರ ಮಗ ಒಂದು ಆಕ್ಟಿವ ಸ್ಕೂಟರ್ ಮತ್ತೊಂದು ಸೈಕಲ್ಲು, ಪೂಜೆ ಮುಗಿದಿತ್ತು. ಕಣ್ಣಲ್ಲಿ ಇವೆಲ್ಲದರ ವೀಕ್ಷಣೆಯೊಂದಿಗೆ ನಮ್ಮಿಬ್ಬರ ಮಾತುಕತೆ ಮುಂದುವರೆದಿತ್ತು.
ನನ್ನ ಸ್ನೇಹಿತ ಸುಮ್ಮನೆ ಮಾತಿಗೆ, "ಏನೋ ಆ ಆಂಟಿ ಸ್ಕೂಟರ್ ನ ದೇವಸ್ತಾನ ಸುತ್ತ ರೌಂಡ್ ಹಾಕುಸ್ತರೆ ಅನ್ಸುತ್ತೆ, ಸ್ಕೂಟರ್ಗು ಪ್ರದಕ್ಷಿಣೆ ಹಾಕುಸ್ಬೋದೇನೋ ಮಗ ಅಂತ ಹೇಳಿದ ಅಷ್ಟೇ, ಪಾರ್ಕಿಂಗ್ ಮಾಡಬಹುದು ಅಂದುಕೊಂಡರೆ ಆಂಟಿ ದೇವಸ್ತಾನದ ಸುತ್ತ ತನ್ನ ಸ್ಕೂಟರ್ ಸವಾರಿ ಮಾಡಿಯೇ ಬಿಡುವುದ, ಅದರ ಜೊತೆಗೆ ತನ್ನ ಮಗನನ್ನೂ ಕೂಡ ಹಿಂದೆ ಬಾಡಿಗಾರ್ಡ್ ನಂತೆ ಕರೆದೊಯ್ದರು. ಹರಟೆ ಹೊಡೆಯುತಿದ್ದ ನಮಗೆ ಹುಸಿ ನಗು ಶುರುವಾಗಿತ್ತು, ನಂತರ ಆಂಟಿ ಹಾಗೆಯೇ ದ್ವಿಚಕ್ರವಾಹನ ಚಲಿಸಿಕೊಂಡು ನಮ್ಮ ಮುಂದೆಯೇ ಬಂದರು, ಸ್ನೇಹಿತ ಏನೋ ಆಂಟಿ ನಕ್ತವ್ರೆ ಅಂತ ಮೊಕ್ಕೆ ಹುಗ್ಯೋಕ್ ಏನಾದ್ರೂ ಬತ್ತಾವ್ರ ಅಂದ, ನೋಡಿದ್ರೆ ಇನ್ನೆರಡು ಮುಚ್ಚಿದ್ದ ದೇವಸ್ತಾನಗಳ ಪ್ರದಕ್ಷಿಣೆ ಶುರುವಾಗಿತ್ತು, ನಮ್ಮ ಹುಸಿ ನಗು ಹೊಟ್ಟೆ ಬಿರಿಯುವ ನಗುವಾಗಿತ್ತು. ಸೈಕಲ್ಲು ಹೊಡೆಯುತಿದ್ದ ಮಗನಿಗೆ ನಮ್ಮಿಬ್ಬರ ನಗು ಅರ್ಥವಾಗಿತ್ತು, ಅಮ್ಮ ನಾನು ಹೋಗ್ತೀನಿ ಅಂತ ಸೈಕಲ್ಲನ್ನು ತಿರುಗಿಸಿ ದೌಡಾಯಿಸಲು ಶುರು ಮಾಡಿದ್ದ ಅಷ್ಟರಲ್ಲಿ ಅವರ ಅಮ್ಮ ಹೇ ಬಾರೋ ಇನ್ನೊಂದು ದೇವಸ್ತಾನ ಇದೆ ಎಂದರು, ಮಗ ಸುತ್ತ ಬಂದ್ರೆ ಸೈಕಲ್ ಪಂಕ್ಚರ್ ಆಗುತ್ತೆ ನಾನ್ ಹೋಗ್ತೀನಿ ಅಂದ, ಹೇ ಏನು ಆಗಲ್ಲ  ಸುಮ್ನೆ ಬಾರೋ ಲಾಸ್ಟ್ ರೌಂಡು ಅಂತ ಹೇಳಿ ರೌಂಡ್ ಅಂದರೆ ವಾಹನಾಸೀನರಾಗಿ ಪ್ರದಕ್ಷಿಣೆ ಮುಗಿಸಿದ್ದರು. ಇವೆಲ್ಲವೂ ಕಾಮಿಡಿ ಸರ್ಕಸ್ನಂತೆ ಭಾಸವಾಗತೊಡಗಿತ್ತು. ಆದರೂ ಏನಪ್ಪಾ ಮಾಡ್ರನ್ ದುನಿಯಾ ಎಲ್ಲವೂ ಯಂತ್ರೋಮಯ ಆಗುತ್ತಿರುವ ಈ ಕಾಲದಲ್ಲಿ ಮುಂದೊಂದು ದಿನ ಮನೆಯಲ್ಲೇ ಕುಳಿತು ರೋಬೋ ಕಳಿಸಿ ದೇವರ ಬಳಿ ಪ್ರಸಾದ ಅರ್ಚನೆ ಮಾಡಿಸಿಕೊಂಡು ಬರುವಂತೆ ಹೇಳಿ ಕಳಿಸಬಹುದು. ಇರುವ ಜೀವವ ಮರೆತು ಈ ಮನುಷ್ಯ ತಾನೇ ಸೃಷ್ಟಿಕರ್ತನಾಗಲು ಹೊರಟಿದ್ದಾನೆಯೇ  ಎನ್ನುವ ಪ್ರಶ್ನೆಯೂ ಕಾಡತೊಡಗಿತ್ತು! ಅಯ್ಯೋ ಬಾರಪ್ಪ ಇರ್ಲಿ ಪ್ರಪಂಚದ ಬಗ್ಗೆ ಯೋಚನೆ ಮಾಡ್ತಾ ಕುಂತ್ರೆ ನಾವ್ ಜೀವನವೆಲ್ಲ ಹಿಂಗೆ ಕುಂತಿರ್ತಿವಿ ಅಂತ ಅವನ ಮನೆಯ ಬಳಿ ಹೋದರೆ, ಸಣ್ಣ ಎರಡು ಬಾಳೆ ಗಿಡ ಅಂದುಕೊಂಡು ಬೀದಿ ಹಸು ನನ್ನ ದ್ವಿಚಕ್ರವಾಹನದಲ್ಲಿದ್ದ ಬಾಳೆಕಂದಿನ ಎಲೆಗಳನ್ನು ಪೂರ್ತಿ ತಿಂದು ಮುಗಿಸಿ ಹೊರಟು ಹೋಗಿತ್ತು.ಬಾಡಿ ಕೊಳೆತುಹೋಗಬೇಕಿದ್ದ ಆ ಚಿಗುರೆಲೆ ಆ ಹಸುವಿನ ಹೊಟ್ಟೆಯ ಹಸಿವ ಸ್ವಲ್ಪ ಮಟ್ಟಿಗೆ ತಣಿಸಿತಲ್ಲ ಎಂಬ ಸಂತಸವಾಯಿತು. ಹಾಗೆಯೇ ಮತ್ತೊಂದು ಪ್ರಶ್ನೆ, ಹೌದಲ್ಲವೇ!! ಈ ರೀತಿ ಎಷ್ಟೋ ಹಸಿವಿನಿಂದ ಬಳಲುವವರಿಗೆ ನಾವು ಅಲ್ಲಿ ಇಲ್ಲಿ ತೋರಿಕೆಗೆ ಆಡಂಬರಕ್ಕೆ ದುಂದು ವ್ಯಚ್ಚ ಮಾಡುತ್ತೇವೆ. ಕೈಲಾಗದ ಮನಗಳಿಗೆ ಸಹಾಯ ಹಸ್ತ ನೀಡಿದರೆ ಅವರ ಆಶಿರ್ವಾದವೇ ದೈವ ನೀಡುವ ವರವಲ್ಲವೇ!!
***********************************************************************************************

Sunday, October 6, 2013

ಸದ್ದಿಲ್ಲದ ಗಾಳಿಯಲಿ ಮೌನದ ಸಂದೇಶ!

***********************************************************************************************
ನಿನ್ನ ಪದಗಳು ಹೊರಬರುವ ಮುನ್ನ 
ನಿನ್ನ ಕಂಡು ನನ್ನುಸಿರು ನಿಮಿರುವುದು!

ಮನದೊಳಗೆ ಕಾಮನಬಿಲ್ಲಿನ ಆಗಮನ 
ಬೆರೆಳುಗಳೊಳಗೆ ತಡೆಯಿಲ್ಲದ ರಕ್ತ ಸಂಚಲನ 
ಸ್ಪೂರ್ತಿಯ ಭಾವದಿ ನಿಲ್ಲಿಸದೆ ಮನದ 
ಕೀಲಿಮಣೆಯ ಮೇಲೆ ನಡೆಸಿವೆ ನಿರಂತರ ನರ್ತನ 
ಜೊತೆಗೆ ನಿನ್ನಯ ವರ್ಣನೆ ಮಾಡುವ ಅಕ್ಷರಗಳ ಗಾಯನ 

ಇವೆಲ್ಲವೂ
ನಿನ್ನ ಮೇಲಿನ ಮೋಹದಿಂದಲ್ಲ
ಅರಿವಿಲ್ಲದ ಬುದ್ದಿಯಿಂದಲೂ ಅಲ್ಲ
ಮನಸ್ಸೆಂಬ ಮಾಯೆಯಿಂದಲೂ ಅಲ್ಲ

ಎದೆಯೊಳಗಿನ ಹೃದಯದ ಬಡಿತದಿಂದ!
ನಿನ್ನ ಹೃದಯದ ಮಿಡಿತದಿಂದ!
ಎನ್ನ ಹೃದಯದ ತುಡಿತದಿಂದ!
ಈ ತುಡಿತ-ಮಿಡಿತದ ಮೌನ ಸಂಭಾಷಣೆಯಿಂದ!

ಕಣ್ಣಿಗೆ ಕಾಣದ ಗಾಳಿಯಂತೆ
ನನ್ನ ನಿನ್ನ ನಡುವಿನ ಪ್ರೀತಿ
ಅದು ಕಾಣುವುದಿಲ್ಲ ಗೆಳತಿ
ಆದರೂ ನಾವಿಬ್ಬರೂ ಅದೇ
ಗಾಳಿಯಲ್ಲಿ ಉಸಿರಾಡುತಿಹೆವು!

ನನ್ನೆದೆಯ ಭಾವ ನಿನ್ನ ನಿಶ್ವಾಸದ
ಗಾಳಿಯಲಿ ಉಚ್ವಾಸವ ಬೀರುತಿಹುದು
ನಾನು ನೀನಾಗಿ ನಿನ್ನ ದೇಹ
ಕೆಲ ನಿಮಿಷದ ಕಾಲ ನನ್ನದಾಗಿ
ಆ ಗುಂಗಿನಲ್ಲೇ ನನ್ನ ನಾ ಮರೆತು
ನೀನಾಗಿಯೇ ಕಳೆದುಹೋಗಿಹೆನು!

ಪ್ರೀತಿಯೆಂದರೆ ಇದೇನೇ!!!!!! ಇದೇನೇ!!!!!

~ಜಿ.ಪಿ.ಗಣಿ~


***********************************************************************************************

ನಿಲ್ಲಿಸದಿರು ಚಲಿಸುವುದನು, ನಿನ್ನ ಪಯಣ ಕೊನೆಯಾಗುವತನಕ!

***********************************************************************************************
ನಡೆಗೆ ಗುರಿಯಿಲ್ಲದ ದಾರಿ; 
ದಿಕ್ಕಿಗಾಗಿ ಗಾಳಿ ಬಂದಲ್ಲಿಗೆ ತೂರಿ 
ಮನದೊಳಗೆ ಗೊಂದಲದ ಮಾರಾಮಾರಿ 
ಸಿಗುವ ಅವಕಾಶವೆಲ್ಲವೂ ಹೋಗುತಿದೆ ಕೈ ಜಾರಿ
ಅರಿತ ಬುದ್ದಿಯು ಹೇಳುತಿದೆ
ಎಚ್ಚರವಾಗು ನೀ ಮೊದಲು ಎಂದು, ಸಾರಿ ಸಾರಿ!!

~ಜಿ.ಪಿ.ಗಣಿ~
***********************************************************************************************