ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Sunday, December 22, 2013

ಒಂದಷ್ಟು ತೋಚಿದ್ದು-ಗೀಚಿದ್ದು

*********************************************************************************************** 
ಬದುಕಲಿಡುವ ಹೆಜ್ಜೆಯ ಸದಾ ಗಮನಿಸುತಿರು /
ತಪ್ಪಿದ ಹಾದಿಯನೋಡುತ ಕಾಲಹರಣವನೆಂದಿಗೂ ನೀ ಮಾಡದಿರು //

ಕಲಿತ ವಿದ್ಯೆಯನೆಂದಿಗೂ ಕಳೆಯದಿರು /
ಅದನು ಕಲಿಸಿದ ಗುರುವನೆಂದಿಗೂ ನೀ ಮರೆಯದಿರು //

ಹೆತ್ತ ಕರುಳನೆಂದಿಗೂ ನೋಯಿಸದಿರು /
ತಂದೆ ತಾಯಿಯರನು ಮನದಲಿ ಸದಾ ನೀ ನೆನೆಯುತಿರು //

ನಿತ್ಯವೂ ಸತ್ಯದ ಪಥವ ಕಾಣುತಿರು /
ದುಃಖ ತರಿಸದ ಮಿತ್ಯವ ನೀ ನುಡಿಯುತಿರು //


*********************************************************************************************** 

ಬೈ-2-ಕಾಫಿ

***********************************************************************************************
ನಡುಗುತಿದೆ ಮನವು 
ಪದಗಳ ಹುಡುಕಾಟದಲ್ಲಿ 
ಬೆಚ್ಚನೆಯ ಸವಿನೆನಪಿನ 
ಕಾಣಿಕೆಯನೀಯುವೆಯ 
ಈ ಚಳಿಗಾಲದಲ್ಲಿ!
*********************************************************************************************** 

(ಹಂಗ್)-ರೀ

 ***********************************************************************************************
ಚಿಗುರೆಲೆ ಹಸಿರೊಮ್ಮೆಯಾದರೂ 
ಒಣಗುವುದು /
ನಿನ್ನ ಮೇಲಿನ ಪ್ರೀತಿಯ 
ಹಸಿವು... 
ಎಂದಿಗೂ ನೀಗಲಾರದು //
*********************************************************************************************** 

ರೋಗಿ-ವೈದ್ಯೆ=ನೈವೇದ್ಯೆ

*********************************************************************************************** 

ನಿನ್ನ ಕಂಡ ಅರೆ ಗಳಿಗೆಯಲಿ 
ಮನಕೆ ಅರೆಗುಳಿಗೆಯ ಕೊಟ್ಟಂತಾಯ್ತು /
ಇನ್ನೂ ಎಚ್ಚರವಾಗಿಲ್ಲ!!
ಹೃದಯದ ಶಸ್ತ್ರ ಚಿಕಿತ್ಸೆಯನೇನಾದರೂ 
ನಡೆಸುತ್ತಿರುವೆಯಾ?


ಚಿಕಿತ್ಸೆ ಫಲಕಾರಿಯಾದರೆ 
ನೀನೇ ನನ್ನ ಬದುಕಿಗೆ ಹೊಸ
ಆದಿ/
ಫಲಕಾರಿಯಾಗದಿದ್ದರೆ
ನನ್ನ ಸುಶ್ರೂಷೆಗೆ ನೀನೇ ಆಗಬೇಕು
ದಾದಿ//


*********************************************************************************************** 
***********************************************************************************************
 ಮುಂಗಾರು!
________
ಭಾವವೆಂಬ ಬೀಜವು ಮೊಳಕೆ ಕಾಣದೆ ಇಷ್ಟು ದಿನ ಅನುಭವಿಸಿತ್ತು ಬರಗಾಲ!
ಈಗ ಒಮ್ಮೆಯೇ ಎಲ್ಲವೂ ಮೊಳಕೆ ಕಾಣುತ್ತಿವೆ, ಕಾರಣ ನಿನ್ನ ಆಗಮನದ ಮಳೆಗಾಲ!


(ಓವರ್) ಡೋಸ್
_______________________
ನಿನ್ನೊಲುಮೆಯ ಕರೆಗೆ ಎನ್ನ ಚರದಿಂದ ಬರುವ
ಮೊಳಗುವಿಕೆಯ ಧ್ವನಿಯು, ಕಂಪನ ವಿಧಾನದಲ್ಲಿಲ್ಲದಿದ್ದರೂ 
ಈ ಹೃದಯದ ಮಿಡಿತ ಅದಕ್ಕೆ ಸ್ಪಂದಿಸುತ್ತದೆ.

(ಚರ=ಮೊಬೈಲು, ರಿಂಗ್ಟೋನ್=ಮೊಳಗುವಿಕೆಯ ಧ್ವನಿ, ವೈಬ್ರಟೆರ್ ಮೋಡ್ನಲ್ಲಿಲ್ಲದಿದ್ದರೂ=ಕಂಪನ ವಿಧಾನದಲ್ಲಿಲ್ಲದಿದ್ದರೂ)


***********************************************************************************************

Monday, November 25, 2013

ಅಳಲು!

***********************************************************************************************
ಚಿಂತೆಯಿಂದೊತ್ತ ಚಿತೆಗೆ
ಕೊಳ್ಳಿ ಇಡಲ್ ಮನವು
ಭಾರವಾಗಿರ್ಪುದು!

***********************************************************************************************

ಕೋರಿಕೆ!

***********************************************************************************************
ಬಿಟ್ಟು ಹೋಗುವ ಮುನ್ನ
ಬಚ್ಚಿಟ್ಟುಕೊಂಡು ಹೋದೆ
ಎನ್ನಂತರಂಗವನು 
ಕಾಣದ ಆ ಅಂತರಂಗವನು 
ಎಲ್ಲೆಲ್ಲಿ ಹುಡುಕಲಿ ನಾನು 
ಎಲ್ಲೆಂದರಲ್ಲಿ ನೀನೇ ಕಾಣುತಿರುವೆ
ಮತ್ತೆ ಬಳಿ ಬಂದೆನ್ನಂತರಂಗದ 
ಕದವನು ತಟ್ಟುವೆಯಾ!!!
***********************************************************************************************

Thursday, October 31, 2013


***********************************************************************************************
ನಿತ್ಯವೂ ಮಾಡಬೇಕೆಂಬ ಹಂಬಲ ವ್ಯಾಯಾಮ!
ಅದಕಾಗಿ ಹುಡುಕುವೆನು ಹೊಸ-ಹೊಸ ಆಯಾಮ!
ನಿದ್ರೆಯಲ್ಲಿ ಮುಳುಗಿ ದಿನವೂ ಮಾಡುತಿರುವೆನು ಆರಾಮ!
ಸೋಮಾರಿತನವ ಓಡಿಸಿ ನಾನಾಗ ಬಯಸಿದ್ದೇನೆ ಬಲರಾಮ!

***********************************************************************************************

ಬೇಕು-ಬೇಡ ಎನ್ನುವ ಬೆಳೆ-ಕಳೆಯ ಕಾದಾಟ!


***********************************************************************************************
ಬದುಕೆಂಬ ಹೊಲದಲ್ಲಿ ಬೇಕು ಎನ್ನುವ ಬೆಳೆಯನ್ನು ಬಿತ್ತುತ್ತಾ ಹೋದಷ್ಟು ಬೇಡವಾದ ಸಮಸ್ಯೆಗಳು, ಕಳೆಗಳು, ಹುಳ-ಹುಪ್ಪಟೆಗಳು ಹೆಚ್ಚಾಗುತ್ತಾ ನಮ್ಮ ಬೇಕೆನ್ನುವ ಬೆಳೆಯ ನಾಶ ಮಾಡುತ್ತವೆ, ಅದಕ್ಕಾಗಿಯೆ ಆದಷ್ಟು ನಮಗೆ ಬೇಕು ಎನ್ನುವ ಆ ಬೆಳೆಯನ್ನು ಪೋಷಿಸಿ ಬೆಳೆಸುವುದು, ನಮ್ಮೆಲ್ಲರ ಹೊಣೆಯೇ ಹೊರತು ಅದಕ್ಕೆ ಪ್ರಕೃತಿ ಹೊಣೆಯಲ್ಲ. ನಮ್ಮ ಕೆಲಸ ಕೇವಲ ನಮಗೆ ಬೇಕಾದುದನ್ನು ಆರಿಸಿಕೊಳ್ಳುವುದು, ಬೆಳೆಸುವುದು ಮತ್ತು ಉಳಿಸಿಕೊಳ್ಳುವುದೇ ಹೊರತು ಪ್ರಜ್ಞಾಹೀನರಾಗಿ ಕೂರುವುದಲ್ಲ. ಹುಟ್ಟಿದಾಗ ಬರುವ ಈ ಪ್ರಜ್ಞೆ ಜ್ಞಾನವಾಗಿ ನಂತರ ಸತ್ತಾಗ ಪ್ರಜ್ಞಾಹೀನವಾಗುವುದು ಇದ್ದೇ ಇದೆ. ಸಾಯುವ ಮುಂಚೆಯೇ ಈ ಪ್ರಜ್ಞಾಹೀನರಾಗುವುದು ಎಷ್ಟು ಸರಿ! ಪ್ರಕೃತಿ ನಮ್ಮ ಹುಟ್ಟಿದಂದಿನಿಂದ ನಮಗೆ ಬೇಕಾದುದನ್ನು ಆರಿಸಿಕೊಳ್ಳಲು ಬಿಟ್ಟಿರುವಾಗ ನಮ್ಮ ಸಾವನ್ನು ಅದಕ್ಕೆ ಏಕೆ ಆಯ್ಕೆ ಮಾಡಿಕೊಳ್ಳಲು ಬಿಡಬಾರದು. ಈ ಆತ್ಮಹತ್ಯೆಯಿಂದ ಪ್ರಕೃತಿಗೆ ನೀನು ಮೋಸ ಮಾಡುತ್ತಿಲ್ಲವೇ ಓ ಮನುಜ? ಆತ್ಮಹತ್ಯೆ ಮಾಡಿಕೊಳ್ಳುವ ಹಕ್ಕು ನಿನಗಿಲ್ಲ. ಉಸಿರಲಿ ಉಸಿರಾಗಿ ಪ್ರಕೃತಿಯೇ ನಿನ್ನ ಕರೆದೊಯ್ಯುವ ತನಕ ಉಸಿರಾಡುವುದ ನೀನೆಂದಿಗೂ ಮರೆಯದಿರು. ನಿನ್ನ ಬೇಕು ಬೇಡಗಳ ನಡುವಿನ ಅಂತರವನ್ನು ಅರ್ಥ ಮಾಡಿಕೊಂಡು ಕೊನೆಯ ಉಸಿರಿರುವತನಕ ಪ್ರಕೃತಿಯು ದಯಪಾಲಿಸುವ ಬುದ್ದಿ ನೀ ಅರಿತು ಪ್ರಕೃತಿಯ ಒಳಗೊಂದು ಪ್ರಕೃತಿ ನಿನಾಗೋ ಓ ಮೂಢ!
***********************************************************************************************
***********************************************************************************************
ಚಪಲ!
____
ಕಣ್ಣಿಗೆ ಕಾಣುವ ಆಸೆ
ಕಿವಿಗೆ ಕೇಳುವ ಆಸೆ
ನಾಲಿಗೆಗೆ ಸವಿಯುವ ಆಸೆ
ಚರ್ಮಕೆ ಸ್ಪರ್ಶಿಸುವಾಸೆ
ಮೂಗಿಗೆ ಸುವಾಸನೆಯ ಸವಿಯುವಾಸೆ
ಎನ್ನ ಮನಕೆ ನಿನ್ನಯ ನೆನಪಿನ ಪುಟಗಳ
ಮತ್ತೆ ಮತ್ತೆ ತಿರುವಿ ಹಾಕುವ ಮಹದಾಸೆ!


ಶೋಕಿಪ್ರಿಯೇ!!
_________
ನಿಷ್ಕಲ್ಮಶ ಪ್ರೀತಿಗೆ ಬಂಡೆಯಂತಹ ಮನಸು ಕೂಡ ಕರಗುವುದಂತೆ!
ಕಾಸಿರುವ ಇನಿಯನಿದ್ದರೆ, ಮನಸು ಮಳಿಗೆಗಳ ಕಡೆ ಸದಾ ಕರೆಯುವುದಂತೆ!

***********************************************************************************************

Wednesday, October 30, 2013

ಆತುರಗಾರನಿಗೆ ಬುದ್ದಿ ಮಟ್ಟ!

***********************************************************************************************
ಅರ್ಥವಿಲ್ಲದ ಬದುಕಲ್ಲಿ
ಸಮಯದಭಾವವೆಂಬ ಭಯದಲ್ಲಿ
ಜವಾಬ್ದಾರಿಯೆಂಬ ಅಮೂಲ್ಯ ರತ್ನವ
ಲಗಾಮು ಇಲ್ಲದ ಕುದುರೆಯನೇರಿ ಕೊಂಡೊಯ್ಯುತಿರೆ,
ಜೀವನವೇ ವ್ಯರ್ಥವಾಗುವುದು!
***********************************************************************************************

ಆಸೆಯೆಂಬ ಕೂಸಿಗೆ ತಾಯಾಗು!

***********************************************************************************************
ಆಸೆಯೆಂಬ ಮಗುವ
ಹೆತ್ತ ಗಳಿಗೆಯಲಿ ಬಂದಿಹವು
ನಿರಂತರ ಟೀಕಾಕಾರ!
ಅದನೆತ್ತ ಕರುಳಿಗಷ್ಟೇ ಗೊತ್ತು
ಅದು ತನ್ನ ಅಂಶವೆಂದು
ಅದಕೆ ಬೇಕಿಲ್ಲ ಆಕಾರ!

ಯಾರೇನೇ! ಎಂದರೂ...
ಕುರೂಪ ಹೊಂದಿದ ಮಗುವ
ಮುದ್ದಿಸುವವಳು ಆ ಹೆತ್ತ ತಾಯಿ!
ನೀ ಹೆತ್ತ ಆಸೆಯನು
ಕಾಪಾಡಲು ನೀ ಆಗಬೇಕಾಗಿಲ್ಲ
ಯಾರ ಅನುಯಾಯಿ!

ಮಗುವು ಹೇಗಿದ್ದರೂ
ಅದು ಅವಳ ಸರ್ವಸ್ವ
ಯಾರ ಮಾತನೂ ಕೇಳಳು
ತನ್ನ ಮುದ್ದು ಕಂದಮ್ಮನ ಪೋಷಿಸಲು!

ನೀ ಹೊತ್ತ ಆಸೆಯು
ನಿನ್ನ ಸಾಮರ್ಥ್ಯದ ಬೀಜವಲ್ಲವೇ
ಪರರ ಮಾತ ಕೇಳಿ ನೀನೆಂದಿಗೂ
ಚಿವುಟದಿರು ನಿನ್ನ ಕುಡಿಯೊಡೆದ
ಆ ಗುರಿಯೆಂಬ ಪುಟ್ಟ ಕೂಸನು!

ನಿನ್ನ ಪ್ರೀತಿಯಲಿ ನೀನದನು ಬೆಳೆಸು
ಅದಕೆ ನೋವಾದಾಗ ಸಂತೈಸು
ನಿನ್ನ ಆಸೆಯೆಂಬ ಮಗುವಿಗೆ ನೀ
ತಾಯಿಯಂತಲ್ಲದೆ, ಬೇರ್ಯಾರ
ರೂಪದಲ್ಲೂ ಉಳಿಸಲಾಗದು, ಬೆಳೆಸಲಾಗದು!

~ಜಿ.ಪಿ.ಗಣಿ~

***********************************************************************************************





Sunday, October 20, 2013

ಆಯುಧ ಪೂಜೆಯಲ್ಲೂ ಆಧುನೀಕತೆ / ಆಧುನೀಕತೆಯಲ್ಲಿ ಆಡಂಬರದ ಭಕ್ತಿ!

***********************************************************************************************
ಅಂದು ಆಯುಧ ಪೂಜೆ, ಆಗಷ್ಟೇ ನನ್ನ ದ್ವಿಚಕ್ರ ವಾಹನಕ್ಕೆ ದೃಷ್ಟಿಯಾಗಬಾರದೆಂದು ನಿಂಬೆ ಹಣ್ಣು ಮೆಣಸಿನಕಾಯಿ ಮತ್ತೆ ಎರಡು ಚಿಗುರಿದ ಬಾಳೆಕಂದನ್ನು ಕಟ್ಟಿ ಪೂಜೆ ಮಾಡಿ ಸುತ್ತಾಡಿ ಬರುವ ಎಂದು ಹೊರಟೆ.  ಸ್ನೇಹಿತನನ್ನು ಭೇಟಿ ಮಾಡುವ ಎಂದು ಅವನಿಗೆ ಕರೆ ಮಾಡಿ ಅವನ ಮನೆಗೆ ಹೋದೆ. ಮನೆ ದೇವಸ್ತಾನದ ಬಳಿಯಲ್ಲಿ ಇದ್ದದ್ದರಿಂದ ನನ್ನ ದ್ವಿಚಕ್ರ ವಾಹನವನ್ನು ಅವನ ಮನೆಯ ಮುಂದೆಯೇ ನಿಲ್ಲಿಸಿ ಇಬ್ಬರೂ ಮಾತನಾಡುತ್ತ ದೇವಸ್ತಾನ ಸೇರಿದೆವು. ಕೂರುವ ಬೆಂಚಿನ ಮೇಲೆ ಕುಳಿತು ಸ್ಕೂಲಿನ ಹಳೆ ನೆನಪುಗಳು ಈಗಿನ ಬದುಕಿನ ಪುಟಗಳ ಸ್ವಲ್ಪ ಹಿಂದೆ ತಿರುವಿ  ಹರಟೆ ಶುರು ಮಾಡಿದ್ದೆವು. ಮೂರು ದೇವಸ್ತಾನಗಳು ಇದ್ದವು ಎರಡು ದೇವಸ್ತಾನಗಳು ಬಾಗಿಲು ಮುಚ್ಚಿದ್ದವು, ಒಂದು ದೇವಸ್ತಾನದಲ್ಲಿ ಬಂದವರ ವಾಹನಗಳಿಗೆ ಪೂಜೆ ಭರದಿಂದ ಸಾಗಿತ್ತು. ಒಂದರ ನಂತರ ಮತ್ತೊಂದು. ಹಾಗೆಯೇ ಒಬ್ಬರು ಆಂಟಿ ಮತ್ತು ಅವರ ಮಗ ಒಂದು ಆಕ್ಟಿವ ಸ್ಕೂಟರ್ ಮತ್ತೊಂದು ಸೈಕಲ್ಲು, ಪೂಜೆ ಮುಗಿದಿತ್ತು. ಕಣ್ಣಲ್ಲಿ ಇವೆಲ್ಲದರ ವೀಕ್ಷಣೆಯೊಂದಿಗೆ ನಮ್ಮಿಬ್ಬರ ಮಾತುಕತೆ ಮುಂದುವರೆದಿತ್ತು.
ನನ್ನ ಸ್ನೇಹಿತ ಸುಮ್ಮನೆ ಮಾತಿಗೆ, "ಏನೋ ಆ ಆಂಟಿ ಸ್ಕೂಟರ್ ನ ದೇವಸ್ತಾನ ಸುತ್ತ ರೌಂಡ್ ಹಾಕುಸ್ತರೆ ಅನ್ಸುತ್ತೆ, ಸ್ಕೂಟರ್ಗು ಪ್ರದಕ್ಷಿಣೆ ಹಾಕುಸ್ಬೋದೇನೋ ಮಗ ಅಂತ ಹೇಳಿದ ಅಷ್ಟೇ, ಪಾರ್ಕಿಂಗ್ ಮಾಡಬಹುದು ಅಂದುಕೊಂಡರೆ ಆಂಟಿ ದೇವಸ್ತಾನದ ಸುತ್ತ ತನ್ನ ಸ್ಕೂಟರ್ ಸವಾರಿ ಮಾಡಿಯೇ ಬಿಡುವುದ, ಅದರ ಜೊತೆಗೆ ತನ್ನ ಮಗನನ್ನೂ ಕೂಡ ಹಿಂದೆ ಬಾಡಿಗಾರ್ಡ್ ನಂತೆ ಕರೆದೊಯ್ದರು. ಹರಟೆ ಹೊಡೆಯುತಿದ್ದ ನಮಗೆ ಹುಸಿ ನಗು ಶುರುವಾಗಿತ್ತು, ನಂತರ ಆಂಟಿ ಹಾಗೆಯೇ ದ್ವಿಚಕ್ರವಾಹನ ಚಲಿಸಿಕೊಂಡು ನಮ್ಮ ಮುಂದೆಯೇ ಬಂದರು, ಸ್ನೇಹಿತ ಏನೋ ಆಂಟಿ ನಕ್ತವ್ರೆ ಅಂತ ಮೊಕ್ಕೆ ಹುಗ್ಯೋಕ್ ಏನಾದ್ರೂ ಬತ್ತಾವ್ರ ಅಂದ, ನೋಡಿದ್ರೆ ಇನ್ನೆರಡು ಮುಚ್ಚಿದ್ದ ದೇವಸ್ತಾನಗಳ ಪ್ರದಕ್ಷಿಣೆ ಶುರುವಾಗಿತ್ತು, ನಮ್ಮ ಹುಸಿ ನಗು ಹೊಟ್ಟೆ ಬಿರಿಯುವ ನಗುವಾಗಿತ್ತು. ಸೈಕಲ್ಲು ಹೊಡೆಯುತಿದ್ದ ಮಗನಿಗೆ ನಮ್ಮಿಬ್ಬರ ನಗು ಅರ್ಥವಾಗಿತ್ತು, ಅಮ್ಮ ನಾನು ಹೋಗ್ತೀನಿ ಅಂತ ಸೈಕಲ್ಲನ್ನು ತಿರುಗಿಸಿ ದೌಡಾಯಿಸಲು ಶುರು ಮಾಡಿದ್ದ ಅಷ್ಟರಲ್ಲಿ ಅವರ ಅಮ್ಮ ಹೇ ಬಾರೋ ಇನ್ನೊಂದು ದೇವಸ್ತಾನ ಇದೆ ಎಂದರು, ಮಗ ಸುತ್ತ ಬಂದ್ರೆ ಸೈಕಲ್ ಪಂಕ್ಚರ್ ಆಗುತ್ತೆ ನಾನ್ ಹೋಗ್ತೀನಿ ಅಂದ, ಹೇ ಏನು ಆಗಲ್ಲ  ಸುಮ್ನೆ ಬಾರೋ ಲಾಸ್ಟ್ ರೌಂಡು ಅಂತ ಹೇಳಿ ರೌಂಡ್ ಅಂದರೆ ವಾಹನಾಸೀನರಾಗಿ ಪ್ರದಕ್ಷಿಣೆ ಮುಗಿಸಿದ್ದರು. ಇವೆಲ್ಲವೂ ಕಾಮಿಡಿ ಸರ್ಕಸ್ನಂತೆ ಭಾಸವಾಗತೊಡಗಿತ್ತು. ಆದರೂ ಏನಪ್ಪಾ ಮಾಡ್ರನ್ ದುನಿಯಾ ಎಲ್ಲವೂ ಯಂತ್ರೋಮಯ ಆಗುತ್ತಿರುವ ಈ ಕಾಲದಲ್ಲಿ ಮುಂದೊಂದು ದಿನ ಮನೆಯಲ್ಲೇ ಕುಳಿತು ರೋಬೋ ಕಳಿಸಿ ದೇವರ ಬಳಿ ಪ್ರಸಾದ ಅರ್ಚನೆ ಮಾಡಿಸಿಕೊಂಡು ಬರುವಂತೆ ಹೇಳಿ ಕಳಿಸಬಹುದು. ಇರುವ ಜೀವವ ಮರೆತು ಈ ಮನುಷ್ಯ ತಾನೇ ಸೃಷ್ಟಿಕರ್ತನಾಗಲು ಹೊರಟಿದ್ದಾನೆಯೇ  ಎನ್ನುವ ಪ್ರಶ್ನೆಯೂ ಕಾಡತೊಡಗಿತ್ತು! ಅಯ್ಯೋ ಬಾರಪ್ಪ ಇರ್ಲಿ ಪ್ರಪಂಚದ ಬಗ್ಗೆ ಯೋಚನೆ ಮಾಡ್ತಾ ಕುಂತ್ರೆ ನಾವ್ ಜೀವನವೆಲ್ಲ ಹಿಂಗೆ ಕುಂತಿರ್ತಿವಿ ಅಂತ ಅವನ ಮನೆಯ ಬಳಿ ಹೋದರೆ, ಸಣ್ಣ ಎರಡು ಬಾಳೆ ಗಿಡ ಅಂದುಕೊಂಡು ಬೀದಿ ಹಸು ನನ್ನ ದ್ವಿಚಕ್ರವಾಹನದಲ್ಲಿದ್ದ ಬಾಳೆಕಂದಿನ ಎಲೆಗಳನ್ನು ಪೂರ್ತಿ ತಿಂದು ಮುಗಿಸಿ ಹೊರಟು ಹೋಗಿತ್ತು.ಬಾಡಿ ಕೊಳೆತುಹೋಗಬೇಕಿದ್ದ ಆ ಚಿಗುರೆಲೆ ಆ ಹಸುವಿನ ಹೊಟ್ಟೆಯ ಹಸಿವ ಸ್ವಲ್ಪ ಮಟ್ಟಿಗೆ ತಣಿಸಿತಲ್ಲ ಎಂಬ ಸಂತಸವಾಯಿತು. ಹಾಗೆಯೇ ಮತ್ತೊಂದು ಪ್ರಶ್ನೆ, ಹೌದಲ್ಲವೇ!! ಈ ರೀತಿ ಎಷ್ಟೋ ಹಸಿವಿನಿಂದ ಬಳಲುವವರಿಗೆ ನಾವು ಅಲ್ಲಿ ಇಲ್ಲಿ ತೋರಿಕೆಗೆ ಆಡಂಬರಕ್ಕೆ ದುಂದು ವ್ಯಚ್ಚ ಮಾಡುತ್ತೇವೆ. ಕೈಲಾಗದ ಮನಗಳಿಗೆ ಸಹಾಯ ಹಸ್ತ ನೀಡಿದರೆ ಅವರ ಆಶಿರ್ವಾದವೇ ದೈವ ನೀಡುವ ವರವಲ್ಲವೇ!!
***********************************************************************************************

Sunday, October 6, 2013

ಸದ್ದಿಲ್ಲದ ಗಾಳಿಯಲಿ ಮೌನದ ಸಂದೇಶ!

***********************************************************************************************
ನಿನ್ನ ಪದಗಳು ಹೊರಬರುವ ಮುನ್ನ 
ನಿನ್ನ ಕಂಡು ನನ್ನುಸಿರು ನಿಮಿರುವುದು!

ಮನದೊಳಗೆ ಕಾಮನಬಿಲ್ಲಿನ ಆಗಮನ 
ಬೆರೆಳುಗಳೊಳಗೆ ತಡೆಯಿಲ್ಲದ ರಕ್ತ ಸಂಚಲನ 
ಸ್ಪೂರ್ತಿಯ ಭಾವದಿ ನಿಲ್ಲಿಸದೆ ಮನದ 
ಕೀಲಿಮಣೆಯ ಮೇಲೆ ನಡೆಸಿವೆ ನಿರಂತರ ನರ್ತನ 
ಜೊತೆಗೆ ನಿನ್ನಯ ವರ್ಣನೆ ಮಾಡುವ ಅಕ್ಷರಗಳ ಗಾಯನ 

ಇವೆಲ್ಲವೂ
ನಿನ್ನ ಮೇಲಿನ ಮೋಹದಿಂದಲ್ಲ
ಅರಿವಿಲ್ಲದ ಬುದ್ದಿಯಿಂದಲೂ ಅಲ್ಲ
ಮನಸ್ಸೆಂಬ ಮಾಯೆಯಿಂದಲೂ ಅಲ್ಲ

ಎದೆಯೊಳಗಿನ ಹೃದಯದ ಬಡಿತದಿಂದ!
ನಿನ್ನ ಹೃದಯದ ಮಿಡಿತದಿಂದ!
ಎನ್ನ ಹೃದಯದ ತುಡಿತದಿಂದ!
ಈ ತುಡಿತ-ಮಿಡಿತದ ಮೌನ ಸಂಭಾಷಣೆಯಿಂದ!

ಕಣ್ಣಿಗೆ ಕಾಣದ ಗಾಳಿಯಂತೆ
ನನ್ನ ನಿನ್ನ ನಡುವಿನ ಪ್ರೀತಿ
ಅದು ಕಾಣುವುದಿಲ್ಲ ಗೆಳತಿ
ಆದರೂ ನಾವಿಬ್ಬರೂ ಅದೇ
ಗಾಳಿಯಲ್ಲಿ ಉಸಿರಾಡುತಿಹೆವು!

ನನ್ನೆದೆಯ ಭಾವ ನಿನ್ನ ನಿಶ್ವಾಸದ
ಗಾಳಿಯಲಿ ಉಚ್ವಾಸವ ಬೀರುತಿಹುದು
ನಾನು ನೀನಾಗಿ ನಿನ್ನ ದೇಹ
ಕೆಲ ನಿಮಿಷದ ಕಾಲ ನನ್ನದಾಗಿ
ಆ ಗುಂಗಿನಲ್ಲೇ ನನ್ನ ನಾ ಮರೆತು
ನೀನಾಗಿಯೇ ಕಳೆದುಹೋಗಿಹೆನು!

ಪ್ರೀತಿಯೆಂದರೆ ಇದೇನೇ!!!!!! ಇದೇನೇ!!!!!

~ಜಿ.ಪಿ.ಗಣಿ~


***********************************************************************************************

ನಿಲ್ಲಿಸದಿರು ಚಲಿಸುವುದನು, ನಿನ್ನ ಪಯಣ ಕೊನೆಯಾಗುವತನಕ!

***********************************************************************************************
ನಡೆಗೆ ಗುರಿಯಿಲ್ಲದ ದಾರಿ; 
ದಿಕ್ಕಿಗಾಗಿ ಗಾಳಿ ಬಂದಲ್ಲಿಗೆ ತೂರಿ 
ಮನದೊಳಗೆ ಗೊಂದಲದ ಮಾರಾಮಾರಿ 
ಸಿಗುವ ಅವಕಾಶವೆಲ್ಲವೂ ಹೋಗುತಿದೆ ಕೈ ಜಾರಿ
ಅರಿತ ಬುದ್ದಿಯು ಹೇಳುತಿದೆ
ಎಚ್ಚರವಾಗು ನೀ ಮೊದಲು ಎಂದು, ಸಾರಿ ಸಾರಿ!!

~ಜಿ.ಪಿ.ಗಣಿ~
***********************************************************************************************

Saturday, September 28, 2013

***********************************************************************************************
ನಾ ಕಂಡ ಲೂಸಿಯ!
________________
ನಾ ನೋಡಲು ಹೋಗಿದ್ದೆ ಲೂಸಿಯ
ಹೇಳಲಿರುವದರೊಳಗಿರುವ ವಿಷಯ!

ಅದಕಾಗಿ ಬರೆಯಲು ನಾ
ಹೊರಟಿರುವೆ ಒಂದು ಕವಿತೆಯ!

ಕನಸಿನ ಲೋಕಕೆ ಕರೆದೊಯ್ಯುತಿರುವೆ
ಇರುವನು ಜೊತೆಗೆ ಲೂಸಿಯ
ಬರುವುದಾದರೆ ಬನ್ನಿ ಅದಕೆ ತೆತ್ತಬೇಕು
ನಿಮ್ಮ ಅಮೂಲ್ಯವಾದ  ಸಮಯ!

ನೀವೆನ್ನುವಿರಿ..........!

ಬರೀ ಕುಯ್ಯಬೇಡವೋ ಗೆಳೆಯ!
ಹೇಳುವೆಯಾ ನೀ ಕತೆಯ!

ನಾ ನುಡಿಯುವೆನು,

ಆಯಿತಪ್ಪ ಮಹರಾಯ ........!
ಬರೆಯಲು ನಾ ತೆಗೆಯುತಿರುವೆ
ಎನ್ನ ಮನದ ಲೇಖನಿಯ!
ತೆರೆಯಿರಿ ನಿಮ್ಮೊಳಗಿನ ಆಂತರ್ಯ!

ಬದುಕಲ್ಲಿ ಎಲ್ಲವೂ ಇರುವವನ ಕತೆಯ!
ಎಲ್ಲವೂ ಇದ್ದು ಇಲ್ಲದಿರೆ ಚೆನ್ನ ಎನ್ನುವವನ ವ್ಯಥೆಯ!
ಬಿಡಿಸಲಾಗದ ಕಗ್ಗಂಟೋ ಪ್ರೇಮವೆಂಬ ಮಾಯೆಯ
ಹೇಗೆ ತೋರಲಿ ಅದರಿಂದ ನೀ ಪಡುತಿರುವ ಯಾತನೆಯ!

ಸುಂದರ ಸಾಲುಗಳಿವು ಒಮ್ಮೆ ಓದಿ ಕಳಚೋ ನಿನ್ನ ವಿಷದ ಪೊರೆಯ!

------------------------------------
ನೀ ಮಾಯೆಯೊಳಗೊ... ಮಾಯೆ ನಿನ್ನೊಳಗೊ...
ನೀ ದೇಹದೊಳಗೊ... ದೇಹ ನಿನ್ನೊಳಗೊ...
ನೀ ಕನಸಿನೊಳಗೊ... ಕನಸು ನಿನ್ನೊಳಗೊ...
ನೀ ಅಮಲಿನೊಳಗೊ... ಅಮಲು ನಿನ್ನೊಳಗೊ...
ಮನಸು ದೇಹಗಳೆರಡು ಸೆಳೆಯುವ
ಸುಳಿಯಂತಿರುವ ಪ್ರೇಮದೊಳಗೊ...
---------------------------------------

ನೀವು ಇದನು ತಿಳಿಯಲಾಗದಿದ್ದರೆ ನಿಮಗೆ ಬೇಕಾಗಬಹುದು ಲೂಸಿಯ! ಅದಕ್ಕಾಗಿ ಮತ್ತೆ ಮತ್ತೆ ವೀಕ್ಷಿಸಿ ಲೂಸಿಯ! ಲೂಸಿಯ!
-----
ನಿತ್ಯವೂ ಬದುಕುತ್ತಿರುವ ನಾವು ನಮ್ಮ ಆಲೋಚನೆಗಳು, ಅಲೆಯಂತೆ ಒಂದರ ಹಿಂದೆ ಮತ್ತೊಂದು ಹೊಡೆಯುತ್ತಲೇ ಇರುತ್ತದೆ. ಎಚ್ಚರವಾಗಿದ್ದೂ ಕನಸು ಕಾಣುವ ಆಸೆ, ಆಸೆಗಾಗಿ ನಿದ್ರಿಸುವಾಸೆ, ಆಸೆಯೆಂಬ ಮಾಯೆಯ ಬಣ್ಣಿಸುವುದು ಬಲು ಕಷ್ಟ ಎಲ್ಲಿಂದ ಶುರು ಮಾಡಿದರೂ ಮತ್ತೆ ಅಂತ್ಯವಾಗುವುದು ಅಲ್ಲಿಯೇ. ಇಂತಹ ಕ್ಲಿಷ್ಟವಾದ ಮನೋವೈಜ್ಞಾನಿಕ ವಿಷಯವನ್ನು ಇಟ್ಟುಕೊಂಡು ಅದನ್ನು ಜನರಿಗೆ ಅರ್ಥೈಸುವುದು ಅಷ್ಟು ಸುಲಭದ ಮಾತಲ್ಲ, ಚಿತ್ರ ಸಂಪೂರ್ಣ ಗೊಂದಲಮಯವೆನಿಸಿದರೂ ಕನಸು-ವಾಸ್ತವದ ನಡುವಿನ ಯುದ್ದ ಮುಗಿದು ವಾಸ್ತವದಿ ಸಾಮಾನ್ಯ ಮನುಷ್ಯನಂತೆ ಬದುಕುತ್ತ ಎಲ್ಲರೊಡಗೂಡಿ ಬಾಳುವ ಆಸೆಯೇ ನಮ್ಮ ಲೂಸಿಯ! ಕಥೆಗಳು ಕಪ್ಪು-ಬಿಳುಪು ಮತ್ತು ಬಣ್ಣದಿಂದ ಕೂಡಿದ್ದರೂ ಕೊನೆಗೆ ಅವೆರಡಕ್ಕೂ ಸುಂದರ ಅಂತ್ಯ ಕೊಟ್ಟು ಚಿತ್ರಕಥೆಯನ್ನು ಅಂತ್ಯವಾಗಿಸುವುದು ನಿಜಕ್ಕೂ ಶ್ಲಾಘನೀಯ. ಅಂತಹ ಪರಿಶ್ರಮಕ್ಕೆ ನನ್ನ ಸಲಾಂ. ಪ್ರತಿಯೊಬ್ಬ ನವ ಯುವ ಪ್ರತಿಭೆಗಳ ಪರಿಶ್ರಮದ ಹೂರಣವೇ ಈ ಲೂಸಿಯ! ಯಾರಿಗೆ ಇಷ್ಟವಾಯಿತೋ ಬಿಡ್ತೋ ಬೇಕಿಲ್ಲ ಸಿನೆಮಾ ನೋಡಿ ನನಗೆ ಬೇಕಾದದ್ದು ನಾನು ತೆಗೆದುಕೊಂಡಿದ್ದೇನೆ.

***********************************************************************************************


***********************************************************************************************
ದೂರ ಹೋದಷ್ಟು 
ನಿನ್ನನು ಕಳೆದುಕೊಳ್ಳುವ 
ಭಯ ಆವರಿಪುದು!
ನಿನ್ನ ಬಳಿ ಬಂದಷ್ಟು 
ನನ್ನನು ನಾ ಮರೆಯುವ 
ಅಳುಕು ಆವರಿಪುದು!

ನಾ ನೀನಾಗುವ ಮುನ್ನ 
ನೀ ನಾನಾಗುವ ಮುನ್ನ 
ಕಣ್ಣಲಿ ಕಣ್ಣನಿಟ್ಟು ಮರೆಯೋಣ ಲೋಕವ 
ಒಮ್ಮೆ ಬರುವೆಯ; ಓ ಒಲವೆ!
ಎನ್ನ ಬದುಕು ಕತ್ತಲಾಗುವ ಮುನ್ನ.

***********************************************************************************************

Monday, August 26, 2013

ದುಷ್ಟಸಂಹಾರ!

***********************************************************************************************
ಹೆಣ್ಣೆಂದರೆ ಮರುಗುವುದೇಕೋ
ಈ ಹುಚ್ಚು ಮನವು
ಎದೆಯಾಲನುಂಡು
ವಾತ್ಸಲ್ಯದಿ ಬೆಳೆದು
ತಪ್ಪೊಪ್ಪುಗಳ ಬದಿಗಿರಿಸಿ
ಹರಸುವ ಕೈಗಳ
ವರವೋ- ಶಾಪವೋ
ನಾ ಅರಿಯೆ!

ನೇರ ದೇಹವ
ಸೀಳಿದೆರಡು ಭಾಗದಿ
ಕಾಣದ ಹೃದಯವ
ಸರಿದೂಗಲೆಂದಿತ್ತ
ದೇವರ ನಾಕವೋ
ಅದನೂ ನಾ ತಿಳಿಯೆ!

ಯೌವ್ವನದ ಮದ ಶಿರಕ್ಕೇರಿ
ಆಕರ್ಷಣೆಯ ಅಡಿಯಾಳಾಗಿ
ಬಲಿಯಾಗಲು ಹೊರಟಿರುವ
ಜೊಲ್ಲೊತ್ತ ನಾಯಿಯೇ
ಹೇಗೆ ಹೇಳಲಿ ನಿನ್ನಂತರಂಗ
ತೊಳಲಾಟವನು
ವ್ಯಾಮೋಹದ ಗಾಳಿಯು
ಬೀಸಿದಂತಿದೆ
ನಿನ್ನ ಮನ ಹೊಕ್ಕು
ಹೊಗೆಯಾಡಿ ಉರಿದು
ಕಾಮದ ಜಮದಗ್ನಿಯ ಹೊತ್ತಿಸಿ
ಹೆಚ್ಚಿಸಿ ಮನದ ಕೌತುಕಗಳಿಗೆ
ಪುಷ್ಟಿ ನೀಡಿದಂತಿದೆ!

ತಡೆಯಿಲ್ಲದ ನಡೆಯಿಂದಾಗಿ
ಕೊರಗುತ್ತಿವೆ ಹೆಂಗರುಳುಗಳು!
ದಾನವನಾಗಿ ಮೃಗದಂತೆ
ಎರಗುವದನೇಕೆ ಕಲಿತೆ!
ಹೆತ್ತ ತಾಯ ಮಮತೆಯು
ನಿನ್ನ ಕಣ್ಣಿಗೆ ಕಾಣಲಿಲ್ಲವೇ!
ಅಕ್ಕ ತಂಗಿಯ ಪ್ರೀತಿಯು
ನಿನ್ನರಿವಿಗೆ ಬಾರಲಿಲ್ಲವೇ!

ಕಾಮಾಲೆ ಕಣ್ಣಿಗೆ
ಕಾಣುವುದೆಲ್ಲ ಹಳದಿಯಂತೆ
ಕಾಮಾಲೆ ರೋಗವು ನಿನ್ನ ಬಿಡದೆ
ನೀ ಮನುಜನಾಗುವುದಿಲ್ಲ
ಎರಡು ತೊಟ್ಟು ಹಸಿವಿಗಾಗಿ
ನರಭಕ್ಷಕನಾಗಿಹೋದೆಯಲ್ಲೋ
ನಾ ಕಾಳಿಯವತಾರ ತಾಳುವವರೆಗೂ
ನಿನ್ನಾಟಕೆ ಕೊನೆಯೇ ಇಲ್ಲ!

~ಜಿ.ಪಿ.ಗಣಿ~
***********************************************************************************************

Thursday, August 22, 2013

ರಕ್ಷಾ ಬಂಧನ!

***********************************************************************************************
ಹುಟ್ಟು ಅಕ್ಕ ತಂಗಿಯರ ಕೂಡಿ ಬಾಳಲಾಗಲಿಲ್ಲ 
ಆದರೆ ಬದುಕು ಆ ಕೊರೆತೆಯ ನನಗೆ ಉಳಿಸಲಿಲ್ಲ 
ಪೀಡಿಸುವಾಗವಳು ನನಗೆ ಅಕ್ಕರೆಯ ಅಕ್ಕನಂತೆ 
ಮುದ್ದಿಸುವಾಗವಳು ನನಗೆ ಮುದ್ದಾದ ತಂಗಿಯಂತೆ 
ಈ ಎಲ್ಲವ ಕರುಣಿಸುವ ಆ ತಾಯೆಂಬ ಹೆಂಗರುಳಿರಲು
ನನಗೆಂತಾದರೂ ಚಿಂತೆಯುಂಟೆ!

ಕಲಿಸಿರುವವಳು ಈ ಮತಿಗೆ, ಹೆಣ್ಣೆಂಬ ಜ್ಯೋತಿಗೆ 
ಕೇವಲ ಪ್ರೀತಿಯೆಂಬ ತೈಲವಷ್ಟೇ ಸಾಕೆಂದು!

ಕಾಣದ ಕೈಗಳು ಆ ಅಕ್ಕರೆಯ
ಮಮತೆಯ ಇಟ್ಟವು,
ನೋವೆಂದಾಗ ಧೈರ್ಯ
ತುಂಬಲು ಮುಂದಾದವು!
ರಕ್ತ ಸಂಬಂಧವಿಲ್ಲದಿದ್ದರೂ
ಆತ್ಮ ಸಂಬಂಧವ ತೋರಿ
ಮನದಲಿ ಅಳಿಯದೆ ಹಾಗೆ ಉಳಿದವು!


~ಜಿ.ಪಿ.ಗಣಿ~
***********************************************************************************************

Sunday, August 18, 2013

ಮಮತೆಯ ಶಕ್ತಿ!

***********************************************************************************************
ಶಿರವೆಂಬ ಬ್ರಹ್ಮಾಂಡದೊಳು 
ಸಮಸ್ಯೆಗಳೆಂಬ ಉದ್ವೇಗ ಬಂದೆಡೆ 
ಮನದೊಳಗೇರುವುದು ಸರಿ ತಪ್ಪುಗಳ ಅಲೆಯು 
ನಿನ್ನ ಮಡಿಲೊರಗಿದೆಡೆ ಸಾಕು 
ಆ ಸರಿ ತಪ್ಪುಗಳ ಅಲೆಯ ತಿಳಿಯಾಗಿಸುವ 
ನಿನ್ನ ಪ್ರೀತಿಯ ಮಾಂತ್ರಿಕ ಸ್ಪರ್ಶಕೆ 
ನಾನೇನು ಹೇಳಲಿ, ಓ ನನ್ನ ಜನುಮದಾತೆ!

ಕಾಣದ ದೇವರ
ದಿನವೂ ಬೇಡುವೆವು!
ಕಣ್ಮುಂದಿರುವ ದೇವರ ಪ್ರತಿ
ನಿಮಿಷವೂ ಕಾಡುವೆವು!

ಬೇಕಿದ್ದ ಪಡೆಯಲು
ದೇವನೊಡನೆ
ನಡೆಸುವೆವು
ಕೊಟ್ಟು ತೆಗೆದುಕೊಳ್ಳುವ
ವ್ಯಾಪಾರ!
ಅದೇ ಪ್ರೀತಿಯ,
ಆ ತಾಯಿಗೆ ಇತ್ತರೆ
ಸಿಗುವುದು
ಮಮತೆಯ ಆಶೀರ್ವಾದ
ಅಪಾರ!

~ಜಿ.ಪಿ.ಗಣಿ~

***********************************************************************************************

Saturday, August 17, 2013

ಅರಿವು!

***********************************************************************************************
ಹರವಿದ ಆಸೆಗೆ 
ಮುಡಿಯುವ ಹೂವು 
ಕೂಡ ಬಾಡುವುದಂತೆ!
ಆಸೆಯೆಂಬುದು ನಿರಂತರ 
ತೃಪ್ತಿಯೆಂಬುದು ಸಾರ್ಥಕ್ಯ
ಅರಿತವನಿಗಷ್ಟೇ ದೊರೆಪುದು 
ಸಮಯವೆಂಬ ಮಾಣಿಕ್ಯ!

~ಜಿ.ಪಿ.ಗಣಿ~
***********************************************************************************************

Saturday, August 10, 2013

ಪ್ರೀತಿ ಮಧುರ, ತ್ಯಾಗ ಅಮರ!

***********************************************************************************************
ನೀರಿನಂತಿದ್ದ ನನ್ನ ಹೃದಯಕೆ
ತಿಳಿ ಹಾಲಿನ ಹಾಗೆ
ನೀನು ಬಂದೆ
ನನ್ನೊಳಗೇ ಮಿಂದು
ಬೆರೆತುಹೋದೆ!

ನೀ ಬರುವ ತನಕ
ನನ್ನ ಬಾಳಲಿ ಎಲ್ಲವೂ ನನ್ನ
ಕಣ್ಣಿಗೆ ಗೋಚರವಾಗುತಿತ್ತು!
ನೀ ಬಂದ ಮೇಲೆ
ಎನಗೆ ನೀನಲ್ಲದೆ ಬೇರೇನೂ
ಕಾಣದೆ ಹೋಯ್ತು!

ಎಷ್ಟು ಶ್ರಮವಿತ್ತರೂ
ನಿನ್ನಲಿ, ನನ್ನನು ನಾ
ಹುಡುಕಲಾಗುತ್ತಿಲ್ಲ, ಕಾರಣ
ನಾನೆಲ್ಲವೂ ನೀನೇ ಆಗಿರುವೆ!

ಜಗದ ಕೆಲ ಕಾರಣಕೆ
ನೀ ನನ್ನ ಮರೆತುಬಿಡು ಎಂದರೂ
ನಾ ನಿನ್ನ ಮರೆಯಲಾಗದು!
ನಮ್ಮಿಬ್ಬರ ಆತ್ಮದ ಮಿಲನವ
ಬೇರ್ಪಡಿಸಲೆಂದಿಗೂ ಆಗದು!

ನಾವು ಸತ್ತರೂ ಉಳಿಯುವವು
ನಮ್ಮ ಆತ್ಮಸಂಬಂಧದ
ಪಳೆಯುಳಿಕೆಗಳು!
ಅದುವೇ ದೈವ ಬರೆದ
ವಿಧಿ ಲಿಖಿತಗಳು!

ನಿನಗಾಗಿ ನಾನೇ ದೂರ ಹೋಗಲಿರುವೆ
ಅದಕೆ ಬೇಕು, ನೋವೆಂಬ ಶಾಖ
ಆ ನೋವೆಂಬ ಶಾಖಧಿ, ನಿನ್ನ ಉಳಿಸಿ
ನಾನೇ ಮೊದಲು ಹೊರಡುವೆ
ಕಣ್ಣ ಹನಿಗಳಾಗಿ, ಕರಗಿ ಆವಿಯಾಗಿ
ಸದಾ ನಿನ್ನ ನೆನಪಿನ ಗಾಳಿಗೆ
ತಾಳ ಹಾಕುವ, ತಿಳಿ ಹಾಲಿನ ಮೋಡವಾಗಿ
ಕೇವಲ ನೀನಾಗಿ, ನಿನ್ನ ನೆನಪಲಿ ಅಮರವಾಗಿ!

~ಜಿ.ಪಿ.ಗಣಿ~

***********************************************************************************************

Friday, August 2, 2013

ಪ್ರೇಮ ಪಕ್ಷಿ ಹಾರಿದಾಗ!

***********************************************************************************************
ನನ್ನ ಹೃದಯವೆಂಬ 
ಪ್ರೇಮ ಪಾರಿವಾಳ 
ನಿನ್ನಲ್ಲಿ ಬೆಳೆದು; 
ನನ್ನಲ್ಲಿಗೆ ಬಂದು, 
ಸದಾ ನಿನಗಿಷ್ಟವಾದ 
ಒಲವಿನ ಓಲೆಯ 
ಬರೆಸುತ್ತಲಿರುತ್ತದೆ!

ಜಿ.ಪಿ.ಗಣಿ
***********************************************************************************************

ರಾಗ-ರೋಗ!

***********************************************************************************************
ತಿನ್ನಲು ಆಸೆಯಿತ್ತು 
ಕಂಡಿತು ಒಂದು ಮಾಗಿದ ಹಣ್ಣು 
ಚಾಕುವಿನಿಂದ ಕೊಯ್ದರೆ 
ಒಳಗೆ ಕಂಡದ್ದು ಬರೀ ಹುಳುಕು!

ಯೋಚನೆ ಶುರುವಾಯ್ತು 
ಕೆಲವೊಮ್ಮೆ ಬೇಕೆಂದಾಗಲೇ 
ಈ ರೀತಿ ಆಗುವುದು
ಕಾರಣ ಏನಿರಬಹುದೆಂದು
ತಿಳಿಯಿತು ಅದರ ಆಯಸ್ಸು
ಮುಗಿದಿತ್ತೆಂದು ಆದರೆ ಜೀವ
ಹೊರಡಲು ಇನ್ನೂ ಸೆಣಸಾಡುತ್ತಿದೆಯೆಂದು!


***********************************************************************************************

Tuesday, July 30, 2013

ಆತ್ಮ ಅಮರ!

***********************************************************************************************
ನಾ ಮಸಣದ ಹೂವೆಂದು 
ನಿನ್ನ ಮುಡಿಯ ಕಳಚಿದರೆ 
ನನ್ನ ಗಂಧಕೆ ಬೆಲೆಯಲ್ಲಿ!

ಮುಡಿಯೇ ಕಟ್ಟದ 
ಬಾಲೆಯು ನೀ ಎನಗೆ 
ಅಳದಿರು ಎಂದಿಗೂ 
ನಾ ನಿನ್ನ ಆತ್ಮದೊಳಗಿನ 
ತಾವರೆಯಂತೆ!

~ಜಿ.ಪಿ.ಗಣಿ~

***********************************************************************************************

Sunday, July 28, 2013

ಸ'ಫಲ'

***********************************************************************************************
ಮೊದಲು ಇದ್ದೆವು ನಾವು 
ತುಂಡು ಬಟ್ಟೆಯೂ ಇಲ್ಲದೆ
ಆಗ ಬೇಕೆನಿಸಿತ್ತು ಮಾನ!

ಈಗ ತೊಡುವೆವು ನಾವು 
ತುಂಡು ಬಟ್ಟೆ; ಅದಕೆ 
ಸಿಗುತ್ತಿರುವುದು ಸಮ್ಮಾನ!

~ ಜಿ.ಪಿ.ಗಣಿ~

***********************************************************************************************




ಪ್ರಾರ್ಥನೆ!

***********************************************************************************************
ರವಿಯೆಂಬ ಜ್ಞಾನಜ್ಯೋತಿಯು 
ನಶಿಸಿದೊಡೆ;
ನೆರಳಿನಂತಿರ್ಪ ಮನವು 
ಪೂರ್ಣ ಶರೀರವ ಆವರಿಪುದು! 

ಕಾಣದಿಹುದೋ ಎನ್ನ ಛಾಯೆ
ಸುತ್ತಲೂ ಬರೀ ಕಗ್ಗತ್ತಲು!
ಬೆಳಕ ಅನುಗ್ರಹಿಸೋ ತಂದೆ 
ಆತ್ಮಜ್ಯೋತಿಯ ಉರಿಸಲು 
ಎನ್ನ ಅಸ್ತಿತ್ವವ ಬೆಳೆಸಲು!

ಕೊಳಕು ದೇಹದ ಹೊಲಸು
ಭಾವವನೆಂದಿಗೂ
ಸುಳಿಯಗೊಡದಿರು!
ಆತ್ಮಸ್ಥೈರ್ಯವೆಂಬ ತೈಲವ 
ನೀ ನನ್ನಲ್ಲುಳಿಸೋ ಭವ ಹರನೇ 
ಸದಾ ನಿನ್ನ ನಾಮವ ಜಪಿಸುವೆನು!

ಮಣ್ಣಲಿ ಮಣ್ಣಾಗುವ ಮುನ್ನ
ಈ ದೇಹದಲೊಮ್ಮೆಯಾದರೂ
ಬಂದು ನೆಲೆಸೋ ದೇವಾ; 
ಈ ದೇಹಾತ್ಮಕೆ ಪರಿಪೂರ್ಣತೆಯ 
ಕರುಣಿಸೋ ಮಹಾದೇವ!

~ ಜಿ.ಪಿ.ಗಣಿ~


***********************************************************************************************