ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, November 30, 2012

ವಾಸ್ತವ ಸತ್ಯ !

***********************************************************************************************
ಕಾರ್ಯ ತುರ್ತುಗತಿಯಲ್ಲಿ 
ಸಾಗಲು ತೆತ್ತಬೇಕು ಹಣವನ್ನು !
ಇಲ್ಲವಾದರೆ ತಿರುಗಾಡಿಸಿ 
ಇಳಿಸುವರು ನಮ್ಮ ಬೆವರನ್ನು !

ಕೆಲಸಕ್ಕೂ - ಸಮಯಕ್ಕೂ 
ಇರುವುದೊಂದು ಬಗೆಯ ನಂಟು !
ಆ ನಂಟು ಉಳಿಯಲು ಕಿಸೆಯಲ್ಲಿ 
ತುಂಬಿರಬೇಕು ಕಾಸಿನ ಗಂಟು !

ಕೆಲಸವಾಗುವ ತನಕ 
ಬೇಕು, ನಯ-ವಿನಯ !
ಇಲ್ಲವಾದರೆ ಎಲ್ಲವೂ 
ಆಗುವುದು, ಅಯೋಮಯ !

~ಜಿ.ಪಿ.ಗಣಿ~
***********************************************************************************************

Saturday, November 10, 2012

ಹೇಳುವುದು ಸುಲಭ ಮಾಡುವುದು ಕಷ್ಟ !!

***********************************************************************************************
ನಮ್ಮ ಜೀವನವೇ ಒಂದು ರೀತಿಯ ಒಗಟಂತೆ , ಎಲ್ಲವನ್ನು ತಿಳಿಯಹೊರಟಿರುವ ನಾವು ಬುದ್ದಿ ಬಲಿತಂತೆ ಕಾಣದ ಕೈಗಳು ಮೋಸ ಮಾಡುತ್ತವೆ ಹಾಗೂ ಮಾಡಿಸುತ್ತವೆ, ಸೂತ್ರದ ಗೊಂಬೆಗಳಾಗಿ ಆಡುವ ನಾವು ಕೆಲವೊಮ್ಮೆ ಅನುಭವಕ್ಕೆ ಭಾಸವಾಗಿ, ಅಯ್ಯೋ !! ಹೀಗಾಯಿತಲ್ಲ ಎಂದು ಪರಿತಪಿಸುವುದು ಸರ್ವೇ ಸಾಮಾನ್ಯ . ಸುಮ್ಮನೆ ಹಾಗೆ ನಮ್ಮ-ನಿಮ್ಮಯ ಜೀವನದ ಪುಟಗಳ ಹಿಂದೆ ತಿರುವಿ ನೋಡಿದರೆ ಅರಿವಾಗುತ್ತದೆ . ಅನೇಕ ಬಾರಿ ತಪ್ಪು - ಒಪ್ಪುಗಳ ನಡುವೆ ಬೆಂದು ಸರಿದಾರಿಯ ಕಂಡುಕೊಂಡಿರುತ್ತೇವೆ.ನಮ್ಮ ಕಿರಿಯರು ಅಥವಾ ಸ್ನೇಹಿತರು ಆ ತಪ್ಪು ಮಾಡುವರೆಂಬ ಅರಿವಾಗುತ್ತಲೇ ; ಎಚ್ಚರಿಕೆಯ ಗಂಟೆ , ತಿಳುವಳಿಕೆಯ ಮಾತುಗಳು , ಆಹಾ ! ಏನು ಸರ್ವಜ್ಞರಂತೆ ತಿಳುವಳಿಕೆ ಕೊಟ್ಟಿದ್ದೂ ಕೊಟ್ಟಿದ್ದೆ.ಅದೇ ರೀತಿ ಕೆಲವಷ್ಟು ಅನುಭವಗಳು ನಮ್ಮ ಅರಿವಿಗೆ ಬಾರದೆ ಹೋಗುತ್ತವೆ, ಅನುಭವ ಸ್ವತಃ ಪಡೆಯದೇ ಬರಿ ಸಾಂತ್ವಾನ ಹೇಳುವ ಕಾರ್ಯ ನಮ್ಮದಾಗಿರುತ್ತದೆ.ಒಮ್ಮೆ ನಾವು ಅನುಭವವವಿಲ್ಲದಿದ್ದರೂ  ಆಂತರ್ಯದಿಂದ ಹೊರಬರುವ  ಕಾಣದ ಅಗೋಚರವಾದ ವಾತ್ಸಲ್ಯದ ಸಾಂತ್ವಾನ ಮತ್ತು ಧೈರ್ಯ  ತುಂಬುವ ಮಾತುಗಳು ಅತ್ಯುನ್ನತ ಶಕ್ತಿ ಹೊಂದಿರುತ್ತದೆ. ಅದೇ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬಾರದೇ ಮಾಡಿದ ತಪ್ಪುಗಳನ್ನೇ ಮಾಡುತ್ತಾ ದೇವರನ್ನು ಶಪಿಸುತ್ತ ಹಣೆಬರಹಕ್ಕೆ ಬೊಟ್ಟು ಮಾಡುತ್ತಾ ನಮ್ಮೊಳಗಿನ ಆತ್ಮಸ್ಥೈರ್ಯವನ್ನು ಕೊಲ್ಲುತ್ತಾ ಹೋಗುತ್ತೇವೆ .
                                 ಪರರ ಕರೆಗೆ ಓ ಗೊಡುವ ಮನವು  ತನ್ನೊಳಗಿನ ಆತ್ಮಕೆ ಕವಚ ನೀಡುವುದಿಲ್ಲವೇಕೆ ? ಅದಕ್ಕೆ ಏನೋ ಹೇಳುವುದು;  ಮನುಷ್ಯ ಸಂಗ ಜೀವಿ , ಪರಾವಲಂಬಿ ಎಂದು. ಸ್ವಯಂ ಆತ್ಮಸುಖವ ಬಿಟ್ಟು ಬಾಹ್ಯಲೋಕದ ಸುಖಕ್ಕೆ ಮಾರುಹೋಗುತ್ತಾನೆ .ಆ ಸುಖ ಕೇವಲ ನಶ್ವರ, ಅಲ್ಪ ಸುಖ ಸುಲಭವಾಗಿ ಕೈಗೆಟುಕುವಂತವು. ಆತ್ಮಸುಖ ಅನಂತ ಸುಖ ಅದು ಕೈಗೆಟುಕದೇ  ಇರುವುದು. ಸಿದ್ಧಿಸುವ ಮನವಿರಬೇಕು ಅದಕ್ಕೆ ಅಲ್ಲವೇ ಹೇಳುವುದು , ಮನಸ್ಸಿನಂತೆ ಮಹಾದೇವ  ಎಂದು ಯಾವುದೇ ಕೆಲಸ ಮಾಡುವ ಮುನ್ನ ಶುದ್ದ ಪಡಿಸಬೇಕಾದದ್ದು ನಮ್ಮ ಮನಸನ್ನು; ಪರಿಶುದ್ದ ಮನಸ್ಸಿಲ್ಲದ ಶರೀರ ಧೂಳು  ಹಿಡಿಯುವ ನಿರ್ಜೀವ ವಸ್ತುವಿನಂತೆ ; ಮನದಲ್ಲಿ ಶುದ್ದತೆ ,ಬುದ್ದಿಯಲ್ಲಿ ಸ್ಥಿರತೆ ಮತ್ತು ಜ್ಞಾನದಲ್ಲಿ ಪರಿಣತೆ ಎಲ್ಲವೂ ಇದ್ದರೆ  ನಮ್ಮ ಪ್ರತಿಯೊಂದು ಕಾರ್ಯವು ಫಲಕಾರಿಯಾಗುವುದು. ನಮ್ಮೊಳಗಿನ ಶಕ್ತಿಯನ್ನು ಸದಾ ಪರರಿಂದ ಅರಿಯುವ ಬದಲು ನಮ್ಮನ್ನು ನಾವೇ ಹುಡುಕಿ ಅರ್ಥೈಸಿಕೊಂಡರೆ ಅದಕ್ಕಿನ್ನ ಮಿಗಿಲಾದ ಭಾಗ್ಯ ಮತ್ತೇನು ? ನಾನು ಯಾರು ? ನನ್ನ ಸಾಮರ್ಥ್ಯ ಎಂತದ್ದು ?ನನ್ನ  ಆಶಯಗಳೇನು ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕಂಡುಕೊಂಡರೆ ಬದುಕಿಗೆ ಬೇಕಾದ ಮಾರ್ಗ ಸಿಗದೇ ಇರುವುದೇ ? ಈಗಲು ಅಷ್ಟೇ ಇವೆಲ್ಲ ಹೇಳುವುದು ಎಷ್ಟು ಸುಲಭವೋ ಕಾರ್ಯಗತವಾಗಿಸಲು ಅಷ್ಟೇ  ಕಷ್ಟ ,ಆದರೆ ಅಸಾಧ್ಯವೇನಲ್ಲ !! ಅಲ್ಲವೇ? ಎಲ್ಲರಿಗೂ ಎಲ್ಲರಲ್ಲೂ ತಮ್ಮತನ ಹುಡುಕಿಕೊಂಡು ಬದುಕಬೇಕೆಂಬ ಆಸೆ-ಆಕಾಂಕ್ಷೆಗಳು ಇರುತ್ತವೆ. ಅವುಗಳನ್ನು ಇತಿ-ಮಿತಿಯಾಗಿ ಸವಿದರೇನೆ ಬದುಕು ನೋಡಲು ಚೆನ್ನ.  ಬಾಳ  ಕನ್ನಡಿಯಲ್ಲಿ  ನಮ್ಮನ್ನು ನಾವೇ ಚೆನ್ನಾಗಿ ಅರಿತು ಬದುಕ ಹಾದಿಯ ಹಸನಾಗಿಸೋಣ. ಎಲ್ಲರ ಜೊತೆಗೂಡಿ ನಲಿದು ಎಲ್ಲರಲ್ಲೂ ತಮ್ಮತನ ಹುಡುಕದೆ, ತಮ್ಮಲ್ಲಿ ತಾವು ಕೀಳರಿಮೆ ಹೊಂದದೆ ಮುಕ್ತವಾಗಿ ಸಂಭಾಷಣೆಯ ಮೂಲಕ ಸಮಸ್ಯೆ ಬಗೆ ಹರಿಸಿಕೊಂಡು ;  ಒಕ್ಕೊರಲಿನಿಂದ ಈ ಭೂಮಂಡಲವನ್ನು ಸ್ವರ್ಗಮಯವಾಗಿಸೋಣ!

ನಿಮ್ಮ ಒಳಿತನ್ನು ಬಯಸುವ 
~ಜಿ.ಪಿ.ಗಣಿ~
***********************************************************************************************

Thursday, November 8, 2012

ಏಕಾಂತದಿ ಮರುಗಿದ ಮನಕೊಂದು ಸಾಂತ್ವಾನ !!

***********************************************************************************************

                        ನಾವೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ನೋವನ್ನು ತೀವ್ರವಾಗಿ ಅನುಭವಿಸಿ ಪಟ್ಟಪಾಡುಗಳು ಸಾಕಷ್ಟಿವೆ. ಅದನ್ನು ಯಾರ ಬಳಿ ಹೇಳಿಕೊಳ್ಳುವುದಾಗಲಿ , ಹಂಚಿಕೊಳ್ಳುವುದಾಗಲಿ ಮಾಡುವುದಿಲ್ಲ ! ಅಂತಹ ಸಮಯದಲ್ಲಿ ಬರುವ ಸ್ನೇಹಿತನೇ ಈ ಏಕಾಂತ ;  ಆ ನೋವು, ಸಂಕಟ , ವಿಮರ್ಶೆ ಎಲ್ಲವೂ ಒಮ್ಮೆಯೇ ಸುನಾಮಿಯಂತೆ ಅಪ್ಪಳಿಸುತ್ತದೆ. ಅಂತಹ ಒತ್ತಡವನ್ನು ಎದುರಿಸುವ ಶಕ್ತಿ ಇಲ್ಲದಿರೆ ಬದುಕುವುದು ಬಲು ಕಷ್ಟ! ಅಂತಹ ನೋವನ್ನು ತಕ್ಕ ಮಟ್ಟಿಗೆ ಬಿಚ್ಚಿಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ.
                   ಇಂತಹ ಸಂಕಟದ ವಿಷಯ ಬೇಕೇ ಎಂಬ ಪ್ರಶ್ನೆ ಕಾಡದೆ ಇರುವುದಿಲ್ಲ. ಹೌದು ಇದು ಬೇಡವೆನಿಸಿದರೂ ಬರೆಯಲು ಯೋಚಿಸಿದ ಉದ್ದೇಶವೇನೆಂದರೆ ಕೆಲವರಿಗೆ ಈ ನೋವು ಎಂಬುದು ತಮಗೆ ಮಾತ್ರ ಸೀಮಿತವಾಗಿದೆ ಎಂದು ಅವರ ಚೌಕಟ್ಟಿನಲ್ಲಿ ಮಾತ್ರ ಯೋಚಿಸಿ ಪರರ ರೀತಿಯ ಹಾಗೆ ನಾನು ಯಾಕೆ ಇಲ್ಲ ? ನನಗು ಅವರ ಹಾಗೆ ಸೌಕರ್ಯ ಇದ್ದಿದರೆ ಈ ರೀತಿ ಆಗುತ್ತಿರಲಿಲ್ಲ ಎಂಬ ಅನೇಕ ಪ್ರಶ್ನೆಗಳು ಉದ್ಭವವಾಗುವುದು ಸರ್ವೇ ಸಾಮಾನ್ಯ. ಅಂತಹ ಎಲ್ಲ ಪ್ರಶ್ನೆಗಳಿಗೆ ಈ ಅಲ್ಪ  ಮತಿಯಿಂದ ಉತ್ತರಿಸುವ ಪ್ರಯತ್ನವಷ್ಟೇ. ಪೀಟಿಕೆಯೇ ಹೆಚ್ಚಾಯ್ತು ಮೂಲ ವಸ್ತು ಬರಲಿ ಎಂದು ಮನದಲ್ಲಿ ಕೇಳಿಕೊಳ್ಳುತ್ತಿದ್ದೀರ ? ಸರಿ ಇನ್ನು ತಡವೇಕೆ ಬನ್ನಿ ಹೋಗೋಣ ನೋವಿನ ಲೋಕಕ್ಕೆ !!

                   ನಿಮ್ಮ ಬದುಕಿನ  ಕಪ್ಪು-ಬಿಳುಪಿನ  ಚಿತ್ರ  ತೆರೆದುಕೊಳ್ಳಿ ಯಾವಾಗಲೋ ಒಮ್ಮೆ ಯಾರದರನ್ನು ಕಳೆದುಕೊಂಡಾಗ ; ಪ್ರೀತಿ ದೂರವಾದಾಗ ; ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ; ಮನೆಯಲ್ಲಿ ಬಡತನದಿಂದ ಬಳಲಿದಾಗ ;ಅನಾಥರಾಗಿ ಹುಟ್ಟಿ ಬದುಕುವಾಗ ; ಹೆಂಡತಿ ಗಂಡನ ಹಿಂಸೆಯಿಂದ ಬಳಲಿದಾಗ ; ಮುದ್ದಾದ ಹೆಂಡತಿ ಗಂಡನ  ತೊರೆದಾಗ ; ಮಕ್ಕಳು ಪೋಷಕರನ್ನು ಮರೆತಾಗ ; ಒಟ್ಟಾರೆ ನೋವಿಲ್ಲದ ಜೀವನವೇ ಇಲ್ಲ ಎಂದು ಹೇಳುತ್ತೇನೆ. ಮತ್ತಷ್ಟು ಹೇಳಲು ಹೊರಟರೆ ಸಮಸ್ಯೆಗಳ ನಿಘಂಟನ್ನು ಬರೆಯಬಹುದು. ಸದ್ಯಕ್ಕೆ ಇರಲಿ ಅಂತಹ ಕಹಿ ಘಟನೆಗಳನ್ನು ಒಮ್ಮೆ ತಿರುವಿ ನೋಡಿದಾಗ ಆ ಸಮಯದಲ್ಲಿ ಒಂದು ರೀತಿ ಹೊಟ್ಟೆಯನ್ನು ಯಾರೋ ಕಿವಿಚಿದಷ್ಟು ಧರ್ಮಸಂಕಟವಾಗುತ್ತಿದೆ, ಅಯ್ಯೋ ..!ಅಮ್ಮ ಯಾಕಿಷ್ಟು ಯಾತನೆ ಎಂದು ಚೀರಬೇಕೆಂದಿದ್ದರೂ ಚೀರದೆ ಅದನ್ನು ಹೃದಯಕ್ಕೆ ಹೊಕ್ಕಿಸಿ ನೋವಿನಿಂದ ಉಂಟಾದ ಕಿಡಿಯು  ಹೊತ್ತಿ ಉರಿಯಲಾರಂಭಿಸಿ ಜಮದಘ್ನಿಯಂತೆ ಆರ್ಭಟಿಸಿ ದಗದಗ ಶರೀರವನೆಲ್ಲ  ಉರಿದು , ಹಿಂಡಿ ಹಿಸುಕಿ ಮುದ್ದೆಯಾಗಿಸಿಬಿಡುತ್ತದೆ.ಒಮ್ಮೊಮ್ಮೆ ಬೆಟ್ಟದ ತುದಿಯಲ್ಲಿ ಕುಳಿತು ನೀಳೆತ್ತರವಾದ ಭೂಮಿಯ ನೋಡಬೇಕೆನಿಸುವಷ್ಟು ಮನಸ್ಸು ನಮಗರಿಯದಂತೆ ನಮ್ಮೊಳಗಿನ ಆಳಕ್ಕೆ ಇಳಿದುಬಿಡುತ್ತದೆ.ಸಂಕಟವೆಂಬ ಶತ್ರುವನ್ನು ಯುದ್ದದಲ್ಲಿ ಮಣಿಸಲಾಗದೆ ಮಳೆಯ ರಭಸದ ಒಡೆತಕ್ಕೆ ನಿಲ್ಲಬೇಕೆನಿಸಿಸುತ್ತದೆ. ಸಿಕ್ಕಿದ ಕಡೆಯಲ್ಲ ಗುದ್ದಬೇಕೆನಿಸುತ್ತದೆ. ತಲೆಯನ್ನು ಚಚ್ಚಿಕೊಳ್ಳುವಷ್ಟು ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ.ಪ್ರಪಂಚ ಏಕೆ ಹೀಗೆ ಹುಚ್ಚರಂತೆ ಬಡಿದಾಡುತ್ತಿದೆ ! ಮನದೊಳಗೆ ಯಾತನೆಯನ್ನು ಹೊರಹಾಕದೆ ಒಬ್ಬರ ಮೇಲೊಬ್ಬರು ಎಗರಾಡಿ , ಕಾದಾಡಿ ಏಕೆ ಹೀಗೆ ನಿರ್ಜೀವಿಯಾಗುತ್ತಿದ್ದಾರೆ.ಅರಿಯುವ ಮನಸ್ಸಿದ್ದರೂ ಬುದ್ದಿಗೆ ಅದೆಲ್ಲಿ ಮಂಕುಬಡಿದು ಲದ್ದಿ ಹೊಕ್ಕಿತ್ತೋ ಗೊತ್ತಿಲ್ಲ ತಾಳ್ಮೆಯಿಲ್ಲದೆ , ವಿಮರ್ಶೆ ಮಾಡದೆ , ಏನನ್ನೂ ಪರಾಂಬರಿಸದೇ ಒಂದೇ ಸಮನೆ ಯುದ್ದದ್ದಲ್ಲಿ ಅಮಾಯಕರ ಮೇಲೆ ಎರಗುವ ಪರಿಯಂತೆ ನಂಬಿಕೆ , ಪ್ರೀತಿ , ವಾತ್ಸಲ್ಯ , ಮಮತೆ ಎಂಬ ಬದುಕಿನ ಈ ಅಂಗಾಂಗಳನು ಕೊಚ್ಚಿ ಹಾಕುತ್ತಾರೆ.ಈ ಬದುಕಿನ ಸಂಬಂಧಗಳೇ ಹಾಗೆ ಬಂಧವಿಲ್ಲದೆ ಬಂಧನವಾಗಿಹೊಗಿವೆ ಎನ್ನುವಷ್ಟು ಜಿಗುಪ್ಸೆ , ವೈರಾಗ್ಯ ಬಂದುಬಿಡುತ್ತದೆ. ಹಾಗಾದರೆ ಇದಕ್ಕೆ ಕೊನೆಯಿಲ್ಲವೇ ಎಂಬ ಪ್ರಶ್ನೆ ಬರಲಾರದೆ ಇರದು !!ಇಂತಹ ಪ್ರಶ್ನೆಗೆ ಮೋಡಗಳ ವಿಭಿನ್ನ ಉದಾಹರಣೆ ಕೊಟ್ಟು ಹೇಳಬಯಸುತ್ತೇನೆ.
                   ಕೆಲವರು ಬಿಳಿ ಮೋಡದ ಹಾಗೆ ನಾನಾಕಾರದ ಮೋಡವ ತೋರಿ ಆಕರ್ಷಿಸುತ್ತಾರೆ .ಆದರೆ ಕೆಲಕಾಲ ಮಾತ್ರ  ಇದ್ದು  ಮತ್ತೆ ಅದರಾಕಾರ ಬದಲಾಯಿಸಿ ಹಾಗೆ ಗಾಳಿಯಲ್ಲಿ ಮುಂದೆ ಚಲಿಸಿಬಿಡುವಂತೆ ಹೊರಟುಹೋಗುತ್ತಾರೆ . ಇನ್ನು ಕೆಲವರು ಮುಸ್ಸಂಜೆಯಲಿ ತಣ್ಣನೆಯ  ಗಾಳಿ ಬೀಸಿ  ಜಿನುಗುವ ಮಳೆತರಿಸುವ ಮೋಡಗಳ ಹಾಗೆ ,ಮನೋಲ್ಲಾಸವ ಕೊಟ್ಟು ಹರ್ಷೋದ್ಗಾರಕ್ಕೆ ಎಡೆ ಮಾಡಿಕೊಡುತ್ತಾರೆ. ಇವೆ ಸವಿನೆನಪುಗಳಾಗುವವು .ಇನ್ನು ಕೊನೆಯ ಭಾಗದವರು ಅದೇ ಅದೇ ದಟ್ಟ ಕಾರ್ಮೋಡದಂತೆ ಚಲಿಸದೆ ಹಾಗೆ ನಮ್ಮನ್ನು ನೋಡುತ್ತಾ ಮೇಲೆ ನಿಂತು ಕಗ್ಗತ್ತಲೆಯನಿತ್ತು ಕೊನೆಗೆ ಸಿಡಿಲಾರ್ಭಟದಿಂದ ಗುಡುಗಿ ಆಲಿಕಲ್ಲಿನ ಮಳೆಯ ಬೀಳಿಸಿ ನಿಲ್ಲಲ್ಲಾರದೆ ಕೊಚ್ಚಿಕೊಂಡು ಹೋಗುವಷ್ಟು ನೋವಿತ್ತಿಬಿಡುತ್ತವೆ. ಎಲ್ಲ ಭಗವಂತನ ಲೀಲಾಮೃತವಷ್ಟೇ . ಅವನಿತ್ತರೆ  ಯಾವ ಮೋಡಗಳು  ಬೇಕಾದರೂ ಬರಬಹುದು, ಮೊದಲಿನೆರಡು ಮೋಡಗಳು ಬದುಕಿನಲ್ಲಿ ಅಷ್ಟೇನೂ ನೆನಪಿಗೆ ಉಳಿಯುವುದಿಲ್ಲ ಆದರೆ ಮೂರನೇ ಮೋಡ ಮೊದಲೇ ತನ್ನ ಸಿಡಿಲು ಗುಡುಗು ಆರ್ಭಟದಿಂದ ಎಚ್ಚರಿಸುತ್ತವೆ,ಎಚ್ಚರ ತಪ್ಪಿ ಅವುಗಳು ಭಾರಿಸುವ ಆಲಿಕಲ್ಲಿನ ಏಟಿಗೆ ಸಿಗಲಿಚ್ಚಿಸಿದರೆ ಅನುಭವಿಸುವ ಹೊಣೆ ನಾವೇ ಹೊರಬೇಕು, ಆ ಕಹಿ ನೆನಪಿನ ಗಾಯಗಳು ಮಾಸದೆ ಹಾಗೆ ಉಳಿದುಬಿಡುತ್ತದೆ.ಒಮ್ಮೊಮ್ಮೆ ಬದುಕುವುದು ಕೂಡ ಕಷ್ಟ. ಅದಕ್ಕಾಗಿಯೇ ಬದುಕಲ್ಲಿ ಸಿಗುವ ಅಲ್ಪ ಸುಖವನ್ನು ಅನುಭವಿಸುತ್ತ ಧನಾತ್ಮಕ ಚಿಂತನೆಯೊಂದಿಗೆ ಸದ್ಗುಣಗಳನ್ನು ಬೆಳೆಸಿಕೊಂಡು ಸತ್ಕಾರ್ಯಗಳನ್ನು ಮಾಡುತ್ತಾ ಅನ್ಯರಿಗೆ ಕೇಡನ್ನು ಬಯಸದೆ ಜೀವಿಸಬೇಕು . ಈಗಿನ ಕಾಲದಲ್ಲಿ ಮೋಸಕ್ಕೆ ಪ್ರತಿ ಮೋಸ , ಏಟಿಗೆ-ತಿರುಗೇಟು , ಹೀಗೆ ಮಾಡುತಿದ್ದರೆ ಪ್ರಕೃತಿಯ ನಿಯಮಕ್ಕೆ ಬಾಹಿರವಾದ ನಡವಳಿಕೆಯಾಗಿ ಅದರ ಫಲಿತಾಂಶವನ್ನು ನಾವೇ ಹೊರಬೇಕಾಗುತ್ತದೆ. ಕನಸು , ಆಸೆ , ನಿರೀಕ್ಷೆ ಇವೆ ಬದುಕಿನ ದುಃಖದ ಮೂಲ ಬುನಾದಿ ಹೊಂದಿರುವವು. ಇವುಗಳ ಪ್ರೇರಣೆ ಹೆಣ್ಣು- ಹೊನ್ನು-ಮಣ್ಣು ಈ ಮೂರರ ಮಿಶ್ರಣ ,ಇವುಗಳು ಅತಿಯಾದಾಗ ಅಥವಾ ನೆರವೇರದೇ ಇದ್ದಾಗ ಮರುಕ ಹುಟ್ಟಿಸುತ್ತವೆ, ಯಾತನೆಯನ್ನು ತರಿಸುತ್ತವೆ.ಬದುಕು ಸಾಕೆನಿಸುವಷ್ಟು ಒಡೆತ ಕೊಡುತ್ತವೆ.ಅವುಗಳ ಹಿಂದೆ ನಾವು ಬೀಳದೆ ಅವುಗಳನ್ನೇ ನಮ್ಮ ಹಿಂದೆ ಬರುವ ಹಾಗೆ ಮಾಡಿಕೊಂಡು ಬದುಕುವುದೇ ಜೀವನ! ಎಲ್ಲರಿಗು ಎಲ್ಲದರಲ್ಲೂ ಶಕ್ತಿ ,ಯುಕ್ತಿ ಲಭಿಸಲಿ ಅದಕ್ಕಿನ್ನ ಮಿಗಿಲಾಗಿ ಒಬ್ಬ ಮಾನವನಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮಾನವೀಯತೆಯಿಂದ ಜಗದ ಉದ್ದಾರವಾಗಲಿ ಎಂದು ಕಾಣದ ಆ ಮಾರ್ಮಿಕ ದಿವ್ಯಚೇತನನನ್ನು ಕೇಳಿಕೊಳ್ಳುತ್ತೇನೆ.

"ಸರ್ವೇಜನೋ ಸುಖಿನೋ ಭವ೦ತು ಸಮಸ್ತ ಸನ್ಮ೦ಗಳಾನಿ ಭವ೦ತು"

ನಿಮ್ಮೆಲ್ಲರ ಒಳಿತನ್ನು ಬಯಸುವ
~ಜಿ.ಪಿ.ಗಣಿ~
***********************************************************************************************

Wednesday, November 7, 2012

ಅನಾಥವಾಗುವ ಮುನ್ನ ಅನಂತವಾಗು!!

***********************************************************************************************
ಬರೆಯುವ ಕೈಗಳಿವೆ 
ಬೆರೆಯುವ ಮನಗಳಿವೆ 
ಮಾಸದ ಸವಿ ನೆನಪುಗಳು 
ಅಚ್ಚಳಿಯದೆ ಹಾಗೆ ಉಳಿದಿವೆ
ಸ್ಪಂದಿಸಲು ಮನವು
ಹಾತೊರೆಯುತಿದೆ
ಆದರದು ಸೋಮಾರಿತನಕೆ
ಸಿಕ್ಕಿ ಬಳಲುತಿದೆ
ಇದು ಅಂಜಿಕೆಯೋ ?
ಇದು ಸ್ವಾರ್ಥವೋ ?
ಇದು ಅಸಡ್ಡೆಯೋ ?
ಅನ್ಯರ ಜೊತೆ ಸೇರಿದೆಡೆ
ಮನಕೆ ದೊರೆವುದು
ಧೈರ್ಯವೆಂಬ ಸೇನೆಯ ಪಡೆ
ಬದುಕಿಗೆ ಸಿಗುವುದೊಂದು
ಶಿಸ್ತಿನ ನಡೆ !


~ಜಿ.ಪಿ.ಗಣಿ~
***********************************************************************************************